ಶಿವಮೊಗ್ಗ, ಆಗಸ್ಟ್. 03 : ಗೌರವಯುತವಾದ ನಡತೆಯನ್ನು ಹೊಂದಿ ಸಮಾಜಕ್ಕಾಗಿ ದುಡಿದರೆ ಸಮಾಜದಲ್ಲಿ ನಾವು ಅಜರಾಮರವಾಗಿ ಉಳಿಯಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕೆ. ಎ ದಯಾನಂದ್ ಹೇಳಿದರು.
ನಗರದ ಡಾ. ಬಿ. ಆರ್ ಅಂಬೇಡ್ಕರ್ ಭವನದಲ್ಲಿ ರಾಜ್ಯ ಮೀಸಲು ಪೊಲೀಸ್ ಪಡೆ ಆಯೋಜಿಸಿದ್ದ ಸ್ಟುಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಸಮಾಜದಲ್ಲಿ ಕಾಣುವ ಸರಿ ತಪ್ಪುಗಳಿಗೆ ಕನ್ನಡಿಯಾಗಿರಬೇಕು. ಯಾವುದೇ ಕಾನೂನು ಬಾಹಿರ ಘಟನೆಗಳು ಕಂಡರು ಸಹ ಅದನ್ನು ವಿರೋಧಿಸಿ ಸರಿ ದಾರಿಗೆ ತರುವ ಪ್ರಯತ್ನ ಮಾಡಬೇಕು. ಈ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.
ಈ ನಿಟ್ಟಿನಲ್ಲಿ ವಿದ್ಯಾಭ್ಯಾಸದ ಜೊತೆಗೆ ಕಾನೂನು, ಸಮಯ ಪ್ರಜ್ಞೆ, ಮಾದಕ ವ್ಯಸನ ಮುಕ್ತವಾಗಿಸುವ ಕುರಿತು ಅರಿವು ಮೂಡಿಸಿ, ನಾಗರಿಕ ಸಮಾಜವನ್ನು ಸೃಷ್ಟಿಸಿ ಸ್ವಸ್ಥ ದೇಶವನ್ನು ನಿರ್ಮಿಸುವ ಉದ್ದೇಶದಿಂದ ಸ್ಟುಡೆಂಟ್ ಪೊಲೀಸ್ ಕೆಡೆಟ್ ಘಟಕವನ್ನು ರಚಿಸುವ ಕಾರ್ಯವನ್ನು ಪೊಲೀಸ್ ಪಡೆ ಕೈಗೊಂಡಿದೆ ಎಂದರು.
ವಿದ್ಯಾರ್ಥಿಗಳು ಮನಸ್ಸನ್ನು ಸದಾ ತೆರೆದಿಟ್ಟುಕೊಂಡು ಓದಿನೊಂದಿಗೆ ಸಾಂಸ್ಕøತಿಕ ಚಟುವಟಿಕೆ, ಕ್ರೀಡೆ, ಕಲೆ, ಸಂಗೀತ ಇನ್ನು ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೆಕು. ಇವೆಲ್ಲ ಕಾರ್ಯಗಳ ನಡುವೆ ಸಮಾಜದಲ್ಲಿ ನೊಂದವರಿಗಾಗಿ ಮರಗುವ ಮನಸ್ಸು ನಮ್ಮದಾಗಬೇಕು ಹಾಗೂ ಸ್ವಲ್ಪ ಸಮಯವನ್ನು ಅವರಿಗಾಗಿ ಮೀಸಲಿಡಬೇಕು. ಅವರಿಗಾಗಿ ಕಂಬನಿ ಮಿಡಿಯುವ ಕಣ್ಗಳು ನಮ್ಮದಾದಾಗ ಮಾತ್ರ ನೊಂದವರ ಕಂಬನಿ ವರೆಸುವ ಕೈಗಳು ನಮ್ಮದಾಗುತ್ತವೆ ಎಂದು ಅವರು ಹೇಳಿದರು.
ಮನೋವೈದ್ಯ ಡಾ. ಅರವಿಂದ್ ಮಾತನಾಡಿ ದೇಶದೆಲ್ಲೆಡೆ ಪ್ರಾಮಾಣಿಕತೆಯ ಕೊರತೆ ಎದ್ದು ಕಾಣುತ್ತಿದ್ದು ವ್ಯವಸ್ಥೆಯನ್ನು ಸರಿ ದಾರಿಗೆ ತರಲು ಯುವ ಜನತೆ ರಾಜಕೀಯ ಹಾಗೂ ಸಮಾಜದ ಮುಂದಾಳತ್ವ ವಹಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು ಅದಕ್ಕಾಗಿ ಸ್ಟುಡೆಂಟ್ ಪೊಲೀಸ್ ಕೆಡೆಟ್ ಯುವ ನಾಯಕರನ್ನು ನಿರ್ಮಿಸುವ ಭರವಸೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.
ದಕ್ಷತೆ, ಕರ್ತವ್ಯ ಪ್ರಜ್ಞೆ, ಶಿಸ್ತು ಇಂದಿನ ಸಮಾಜಕ್ಕೆ ಮೂಲಭೂತವಾಗಿ ಬೇಕಾಗಿದೆ. ಯಾವುದೇ ಕ್ಷೇತ್ರವಾಗಲಿ ಅದರ ಮೂಲ ಮಿತಿಗಳನ್ನು ಮೀರದೆ ಇದ್ದಲ್ಲಿ ಸಮಾಜದ ಬದಲಾವಣೆ ಸಾಧ್ಯವಿಲ್ಲ. ಪೊಲೀಸ್ ಇಲಾಖೆ ಎಂದರೆ ಕೇವಲ ಶಿಕ್ಷಿಸುವ ಇಲಾಖೆಯಲ್ಲ. ಶಿಕ್ಷೆಯ ನಂತರ ಜೈಲುವಾಸಿಗಳಲ್ಲಿ ಮಾನಸಿಕ ಪರಿವರ್ತನೆ ಮೂಡಿಸಿ ಸಮಾಜದ ಮುಖ್ಯವಾಹಿನಿಗೆ ತರುವಂತಹ ಕಾರ್ಯಗಳನ್ನು ಮಾಡಿದ ಉದಾಹರಣೆಯನ್ನು ನಾವು ನೆನೆಯಬೇಕು. ಈ ಸಾಲಿನಲ್ಲಿ ಕಿರಣ್ ಬೇಡಿಯವರ ಸಾಧನೆ ಗಮನಾರ್ಹ ಹಾಗೂ ಇಂತಹ ಪ್ರಯತ್ನಗಳು ಎಲ್ಲಾ ಕ್ಷೇತ್ರಗಳಲ್ಲೂ ಆಗಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಾದ ಮಂಜುನಾಥ್ ಅಣಜಿ, ದಾಹೂಲ್ ಸಾಬ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಉಪಸ್ಥಿತರಿದ್ದರು. ಹಾಗೂ ವಿವಿಧ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

error: Content is protected !!