ಶಿವಮೊಗ್ಗ : ಜೂನ್ 17 : ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಗೊಳಪಡುವ ಅಂಗನವಾಡಿಯಿಂದ ಪ್ರೌಢಶಾಲೆಯವರೆಗಿನ ಎಲ್ಲಾ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸರ್ಕಾರದ ಯೋಜನೆಗಳು, ಮಹಾನಗರಪಾಲಿಕೆ, ದಾನಿಗಳು ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಅವರು ಇಂದು ಜಿಲ್ಲಾಡಳಿತ ಭವನದಲ್ಲಿ ನಗರ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ಮೇಲುಸ್ತವಾರಿ ಸಮಿತಿ ಅಧ್ಯಕ್ಷರ ಉಪಸ್ಥಿತಿಯಲ್ಲಿ ಸರ್ಕಾರಿ ಶಾಲೆಗಳ ಸರ್ವಾಂಗೀಣ ವಿಕಾಸಕ್ಕಾಗಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಏರ್ಪಡಿಸಿದ್ದ ಚಿಂತನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕಳೆದ ದಶಕಗಳಿಂದೀಚೆಗೆ ಸರ್ಕಾರಿ ಶಾಲೆಗಳ ಅಭಿವೃಧ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ನಿರೀಕ್ಷಿತ ಅನುದಾನ ಲಬ್ಯವಾಗುತ್ತಿಲ್ಲ. ಅಲ್ಲದೇ ಶಾಲೆಗಳ ಮಕ್ಕಳ ಸಂಖ್ಯೆಗನುಗುಣವಾಗಿ ಕಟ್ಟಡಗಳು, ಪೀಠೋಪಕರಣಗಳು, ಕುಡಿಯುವ ನೀರಿನ ಪೂರೈಕೆ ಇತ್ಯಾದಿ ಸಮಸ್ಯೆಗಳ ಕುರಿತು ಗಂಭೀರ ಸ್ವರೂಪದ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಕಟ್ಟಡಗಳ ದುರಸ್ತಿ, ನವೀಕರಣ, ಕುಡಿಯುವ ನೀರು, ಶೌಚಾಲಯ ಮುಂತಾದವುಗಳನ್ನು ಕೊಡುಗೈ ದಾನಿಗಳಿಂದ ದಾನ ಪಡೆದು, ಅದರಿಂದ ಬರುವ ಅನುದಾನದಿಂದ ಆದ್ಯತೆಯನುಸಾರ ಶಾಲೆಗಳ ವಿಕಾಸಕ್ಕೆ ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದ ಅವರು, ಅದಕ್ಕಾಗಿ ಜೂನ್ 21 ಅಥವಾ 24ರಂದು ಜಿಲ್ಲಾ ಉಸ್ತುವಾರಿ ಸಚಿವರ ಉಪಸ್ಥಿತಿಯಲ್ಲಿ ನಗರದ ದಾನಿಗಳನ್ನು ಭೇಟಿ ಮಾಡಿ, ಸರ್ಕಾರಿ ಶಾಲೆಗಳ ವಿಕಾಸಕ್ಕೆ ನಿಧಿಸಂಗ್ರಹಿಸಲಾಗುವುದು ಎಂದರು.
ನಗರದ ಬಹುತೇಕ ಎಲ್ಲಾ ಶಾಲೆಗಳಲ್ಲಿ ಒಂದಿಲ್ಲೊಂದು ಸಮಸ್ಯೆಗಳು ಇದ್ದೇ ಇವೆ. ಅವುಗಳ ಸ್ವರೂಪ ಚಿಕ್ಕದು ಅಥವಾ ದೊಡ್ಡದಾಗಿರಬಹುದಾಗಿದೆ. ಒಟ್ಟಾರೆ ಸಮಸ್ಯೆಯ ಪರಿಹಾರಕ್ಕೆ ಕ್ರಮ ಕೈಗೊಂಡು ಶಾಲೆಗಳ ಉನ್ನತೀಕರಣಗೊಳಿಸಲೇ ಬೇಕಾಗಿರುವುದರಿಂದ ಎಲ್ಲಾ ಶಾಲೆಗಳ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಮುಖ್ಯಸ್ಥರು ಚರ್ಚಿಸಿ ಕ್ರಿಯಾ ಯೋಜನೆಯೊಂದನ್ನು ರೂಪಿಸಿ 2-3ದಿನಗಳೊಳಗಾಗಿ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸುವಂತೆ ಅವರು ಸೂಚಿಸಿದರು.
ದಾನಿಗಳಿಂದ ಸಂಗ್ರಹಿಸಿದ ಅನುದಾನವನ್ನು ಸದ್ಭಳಕೆ ಮಾಡಬೇಕಾಗಿರುವುದರಿಂದ ಹಾಗೂ ಗುಣಮಟ್ಟದ ಕೆಲಸ ಕಾರ್ಯಗಳು ಆಗುವ ನಿಟ್ಟಿನಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಮೇಲುಸ್ತುವಾರಿ ಸಮಿತಿ ಪದಾಧಿಕಾರಿಗಳು ಗಮನಹರಿಸುವಂತೆ ಅವರು ಸೂಚಿಸಿದರು.
ನಗರದ ಶಾಲೆಗಳಲ್ಲಿ ಶಾಲಾ ಅವಧಿಯ ನಂತರ ಶಾಲಾ ಆವರಣ ಹಾಗೂ ಕಟ್ಟಡವನ್ನು ಅನೈತಿಕ ಚಟುವಟಿಕೆಗಳಿಗಾಗಿ ಬಳಕೆ ಮಾಡುತ್ತಿರುವ ಬಗ್ಗೆಯೂ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಅದರ ಸುಧಾರಣೆಗಾಗಿ ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಹಾನಗರಪಾಲಿಕೆಯ ಉಪಮೇಯರ್ ಚನ್ನಬಸಪ್ಪ ಅವರು ಮಾತನಾಡಿ, ಮಹಾನಗರಪಾಲಿಕೆ ವತಿಯಿಂದ ಅಭಿವೃದ್ಧಿ ಕುಂಠಿತ ಶಾಲೆಗಳ ಉನ್ನತೀಕರಣಕ್ಕಾಗಿ ಡಾ|| ಶಿವಕುಮಾರ ಶ್ರೀಗಳ ಹೆಸರಿನಲ್ಲಿ ಯೋಜನೆಯೊಂದನ್ನು ರೂಪಿಸಲಾಗಿದೆ. ಈ ಯೋಜನೆಯಡಿ ನಗರಪಾಲಿಕೆ ವ್ಯಾಪ್ತಿಯ ಸರ್ಕಾರಿ ಶಾಲೆಗಳ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಶಾಲೆಗಳಿಂದ ಬರುವ ಕ್ರಿಯಾ ಯೋಜನೆಯನ್ನು ಗಮನಿಸಿ ಹಾಗೂ ದಾನಿಗಳಿಂದ ಸಂಗ್ರಹವಾಗುವ ನಿಧಿಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯಕ್ಕೆ ತಕ್ಕಂತೆ ಪಾಲಿಕೆಯಿಂದ ಶಾಲೆಗಳ ಅಗತ್ಯತೆಗಳನ್ನು ಪೂರೈಸಲು ಅಗತ್ಯ ಅನುದಾನವನ್ನು ಪಾಲಿಕೆ ವತಿಯಿಂದ ಭರಿಸಲಾಗುವುದು ಎಂದವರು ನುಡಿದರು.
ಸಭೆಯಲ್ಲಿ ಮಹಾನಗರಪಾಲಿಕೆಯ ವಿಪಕ್ಷ ನಾಯಕ ರಮೇಶ್ ಅವರು ಮಾತನಾಡಿ ನಗರಪಾಲಿಕೆ ವತಿಯಿಂದ ಸಂಗ್ರಹಿಸಲಾಗುವ ಶಿಕ್ಷಣ ನಿಧಿಯನ್ನು ನಗರ ಪ್ರದೇಶದ ಸರ್ಕಾರಿ ಶಾಲೆಗಳ ವಿಕಾಸಕ್ಕಾಗಿಯೇ ವ್ಯಯ ಮಾಡುವಂತೆ ತಿಳಿಸಿದ ಅವರು ಶಿಕ್ಷಣ ರಾಷ್ಟ್ರೀಕರಣಗೊಳಿಸಿದಲ್ಲಿ ಶಾಲೆಗಳ ವಿಕಾಸ ಸಾಧ್ಯವಾಗಲಿದೆ ಎಂದವರು ಅಭಿಪ್ರಾಯಪಟ್ಟರು.
ಸಭೆಯಲ್ಲಿ ನಗರದ ಶಾಲೆಗಳ ಆಡಳಿತ ಮಂಡಳಿಗಳಿಂದ ಶಾಲೆಗಳಿಗೆ ಪಾಠೋಪಕರಣ, ಪೀಠೋಪಕರಣ, ಶಿಕ್ಷಕರು, ಶಾಲಾ ಕಾಂಪೌಂಡ್ ನಿರ್ಮಾಣ, ವಿದ್ಯುತ್, ಶೌಚಾಲಯ, ಕುಡಿಯುವ ನೀರು, ಕಟ್ಟಡ ದುರಸ್ತಿ ಮುಂತಾದವುಗಳ ಕುರಿತು ಅನೇಕ ಶಾಲೆಗಳಿಂದ ಬೇಡಿಕೆಗಳು ಬಂದವು.
ಈ ಸಂದರ್ಭದಲ್ಲಿ ಮಹಾನಗರಪಾಲಿಕೆಯ ಮೇಯರ್ ಶ್ರೀಮತಿ ಲತಾಗಣೇಶ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ಸುಮಂಗಳಾ ಪಿ.ಕುಚಿನಾಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ಶೇಷಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ವರಪ್ಪ ಸೇರಿದಂತೆ ಮಹಾನಗರಪಾಲಿಕೆಯ ಎಲ್ಲಾ ವಾರ್ಡುಗಳ ಕಾಪೋರೇಟರ್‍ಗಳು, ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ಶಾಲಾ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

error: Content is protected !!