ಶಿವಮೊಗ್ಗ, ಮಾರ್ಚ್ 01: ಮತದಾನ ಮಾಡಲು ಮತದಾರರ ಚೀಟಿ (ವೋಟರ್ ಸ್ಲಿಪ್) ಯನ್ನು ಆಧಾರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅವರು ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಲೆಕ್ಟ್ರಾನಿಕ್ ಮತ ಯಂತ್ರ ಹಾಗೂ ವಿವಿಪ್ಯಾಟ್ ಕಾರ್ಯನಿರ್ವಹಣೆಯ ಪ್ರಾತ್ಯಕ್ಷಿಕೆಯನ್ನು ತೋರಿಸಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಮತದಾನ ಮಾಡಲು ಆಯೋಗ ಈಗಾಗಲೇ ಕೆಲವು ನಿರ್ದಿಷ್ಟ ಗುರುತಿನ ಚೀಟಿಗಳನ್ನು ನಿಗದಿಪಡಿಸಿದ್ದು, ಮತದಾರರ ಚೀಟಿ ಹೊಂದಿದ್ದರೂ ನಿಗದಿಪಡಿಸಿರುವ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ಮತಗಟ್ಟೆಯಲ್ಲಿ ತೋರಿಸಿದರೆ ಮಾತ್ರ ಮತದಾನಕ್ಕೆ ಅವಕಾಶ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಇವಿಎಂ ಪ್ರಾತ್ಯಕ್ಷಿಕೆ: ಇವಿಎಂ ಹಾಗೂ ವಿವಿಪ್ಯಾಟ್ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಲು ಜಿಲ್ಲೆಯಾದ್ಯಂತ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮತಗಟ್ಟೆ ಅಧಿಕಾರಿ ಬಳಿ ಇರುವ ಕಂಟ್ರೋಲ್ ಯುನಿಟ್‍ನಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಿದ ಬಳಿಕ ಬ್ಯಾಲೆಟ್ ಯುನಿಟ್‍ನಲ್ಲಿ ಮತದಾರರಿಗೆ ಒಂದು ಮತ ಚಲಾಯಿಸಲು ಮಾತ್ರ ಅವಕಾಶವಿರುವುದು. ಮತದಾನ ಮಾಡಿದ ತಕ್ಷಣ ವಿವಿಪ್ಯಾಟ್‍ನಲ್ಲಿ ಏಳು ಸೆಕೆಂಡುಗಳ ಕಾಲ ಯಾರಿಗೆ ಮತ ಚಲಾಯಿಸಲಾಗಿದೆ ಎಂಬ ಕುರಿತು ಕಾಗದದ ಸ್ಲಿಪ್‍ನಲ್ಲಿ ಮಾಹಿತಿ ಮೂಡಿ ಬರುವುದು. ಇದರಲ್ಲಿ ಅಭ್ಯರ್ಥಿ ಸಂಖ್ಯೆ, ಹೆಸರು ಮತ್ತು ಚಿಹ್ನೆ ಕಾಣುವುದು ಎಂದರು.
ವಿವಿಪ್ಯಾಟ್‍ನಲ್ಲಿ ತಾನು ಚಲಾಯಿಸಿರುವ ಅಭ್ಯರ್ಥಿ ಬದಲು ಬೇರೆ ಅಭ್ಯರ್ಥಿ ವಿವರಗಳು ಬಮದರೆ ಮತದಾರರು ಇದನ್ನು ಪ್ರಶ್ನಿಸಬಹುದಾಗಿದೆ. ಒಂದು ವೇಳೆ ಮತದಾರ ಹೇಳಿರುವುದು ಸುಳ್ಳು ಎಂದು ಸಾಬೀತಾದರೆ ಅಂತವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಒಂದು ಮತಗಟ್ಟೆಯ ವಿವಿಪ್ಯಾಟ್‍ನಲ್ಲಿರುವ ಮತಗಳನ್ನು ಎಣಿಕೆ ಮಾಡಲಾಗುವುದು ಎಂದರು.
ಇವಿಎಂ ಮತಯಂತ್ರವನ್ನು ಹ್ಯಾಕ್ ಮಾಡಲು ಅಥವಾ ಅದಕ್ಕೆ ವೈರಸ್ ದಾಳಿಯಾಗಲು ಸಾಧ್ಯವಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ಅವರು ತಿಳಿಸಿದರು.
ಸಿ ವಿಜಿಲ್ ಆಪ್ ಡೌನ್‍ಲೋಡ್ ಮಾಡಿ: ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳನ್ನು ದಾಖಲಿಸಲು ಈ ಕುರಿತಾದ ಚಿತ್ರಗಳು ಅಥವಾ ವಿಡಿಯೊ ಅಪ್‍ಲೋಡ್ ಮಾಡಲು ಸಾಧ್ಯವಾಗುವಂತೆ ಚುನಾವಣಾ ಆಯೋಗ ಸಿ ವಿಜಿಲ್ ಎಂಬ ಆಪ್ ಸಿದ್ಧಪಡಿಸಿದ್ದು, ಇದನ್ನು ಪ್ಲೇ ಸ್ಟೋರ್‍ನಿಂದ ಪ್ರತಿಯೊಬ್ಬರೂ ಡೌನ್‍ಲೋಡ್ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಅವರು ಮನವಿ ಮಾಡಿದರು.
ಜಿಲ್ಲಾಡಳಿತ ಜವಾಬ್ದಾರಿ ಅಲ್ಲ: ಮತದಾರರ ಪಟ್ಟಿಯಲ್ಲಿ ಹೆಸರಿದೆಯೇ, ಯಾವ ಬೂತ್‍ನ ಮತದಾರರ ಪಟ್ಟಿಯಲ್ಲಿ ಹೆಸರಿದೆ ಎಂಬುವುದರ ಬಗ್ಗೆ ತಿಳಿದುಕೊಳ್ಳಲು ಹಲವಾರು ಅವಕಾಶಗಳನ್ನು ಕಲ್ಪಿಸಲಾಗಿದೆ. 1950 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಇದನ್ನು ಪರಿಶೀಲಿಸಬಹುದಾಗಿದೆ. ಪ್ರತಿ ಮತಗಟ್ಟೆಯಲ್ಲಿ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಚುನಾವಣಾ ಎಂಬ ಆಪ್ ಸಿದ್ಧಪಡಿಸಲಾಗಿದ್ದು, ಇದರಲ್ಲಿ ತಮ್ಮ ಹೆಸರನ್ನು ನಮೂದಿಸಿ ವಿವರಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇಷ್ಟೆಲ್ಲಾ ಅವಕಾಶಗಳನ್ನು ನೀಡಿದ ಬಳಿಕವೂ ಚುನಾವಣೆ ದಿನ ಮತಗಟ್ಟೆಯಲ್ಲಿ ಹೆಸರಿಲ್ಲ ಎಂದು ದೂರಿದರೆ ಜಿಲ್ಲಾಡಳಿತ ಅದಕ್ಕೆ ಹೊಣೆಯಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮಿಂಚಿನ ನೋಂದಣಿ: ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ, ಬದಲಾವಣೆ ಇತ್ಯಾದಿಗಳಿಗೆ ಅವಕಾಶ ಕಲ್ಪಿಸಲು ಪ್ರತಿ ಮತಗಟ್ಟೆಗಳಲ್ಲಿ ಮಾರ್ಚ್ 2 ಮತ್ತು 3ರಂದು ಮಿಂಚಿನ ನೋಂದಣಿ ಮಾಡಲಾಗುತ್ತಿದೆ. ಫೆಬ್ರವರಿ 23 ಮತ್ತು 24ರಂದು ನಡೆದ ಮಿಂಚಿನ ನೋಂದಣಿಯಲ್ಲಿ 3ಸಾವಿರಕ್ಕೂ ಅಧಿಕ ಮಂದಿ ನೋಂದಣಿ ಮಾಡಿಸಿದ್ದಾರೆ. ಪ್ರತಿ ಮತಗಟ್ಟೆಗಳಲ್ಲಿ ಮತಗಟ್ಟೆ ಅಧಿಕಾರಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಹಾಜರಿದ್ದು ನೋಂದಣಿ ಕಾರ್ಯ ಮಾಡಲಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.

error: Content is protected !!