ಶಿವಮೊಗ್ಗ, ಸೆ.09 : ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಆಸ್ಪತ್ರೆಗೆ ಹೋಗಲು ತೊಂದರೆ ಅನುಭವಿಸುವವರು ಇ-ಸಂಜೀವಿನಿ ಆಪ್ ಮೂಲಕ ಆನ್‍ಲೈನ್‍ನಲ್ಲಿಯೇ ತಜ್ಞ ವೈದ್ಯರಿಂದ ಆರೋಗ್ಯ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.
ಮೊಬೈಲ್ ಪ್ಲೇ ಸ್ಟೋರ್‍ನಲ್ಲಿ ಇ-ಸಂಜೀವಿನಿ ಒಪಿಡಿ ಆಪ್ ಡೌನ್‍ಲೋಡ್ ಮಾಡುವ ಮೂಲಕ ಅಥವಾ ಗೂಗಲ್‍ನಲ್ಲಿ ಇ-ಸಂಜೀವಿನಿ ಒಪಿಡಿ ಎಂದು ನಮೂದಿಸಿ ನೋಂದಣಿ ಮಾಡಿಕೊಳ್ಳಬೇಕು. ವೆಬ್ ವಿಡಿಯೋ ಮೂಲಕ ಸಂಪರ್ಕಕ್ಕೆ ಬರುವ ವೈದ್ಯರಿಗೆ ಆರೋಗ್ಯ ಸಮಸ್ಯೆ ಕುರಿತು ವಿವರಿಸಿದರೆ, ಅವರು ಆರೋಗ್ಯ ಸಮಸ್ಯೆಗೆ ತಕ್ಕಂತೆ ಚಿಕಿತ್ಸೆ ಸೂಚಿಸುವ ವ್ಯವಸ್ಥೆ ಇದಾಗಿದೆ. ಕರೋನಾ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೆರಳಲು ಸಾಧ್ಯವಾಗದಿರುವ ಸಾರ್ವಜನಿಕರು ಇದರ ಗರಿಷ್ಟ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಬಳಕೆ ಹೇಗೆ: ಟೆಲಿ ಸಮಾಲೋಚನಾ ಸೇವೆಗಾಗಿ ಆಪ್ ತೆರೆದರೆ ಕೇಂದ್ರ ಆರೋಗ್ಯ ಸಚಿವಾಲಯದ ಮುಖಪುಟ ತೆರೆದುಕೊಳ್ಳುತ್ತದೆ. ಇದರಲ್ಲಿ ರೋಗಿಯ ರಿಜಿಸ್ಟ್ರೇಷನ್‍ನಲ್ಲಿ ಮೊಬೈಲ್ ಸಂಖ್ಯೆ ನಮೂದಿಸಿದರೆ ಒಟಿಪಿ ಸಂಖ್ಯೆ ಬರಲಿದೆ. ಈ ಒಟಿಪಿ ನಮೂದಿಸಿದರೆ ರಿಜಿಸ್ಟ್ರೇಷನ್ ಅಪ್ಲಿಕೇಶನ್ ತೆರೆದುಕೊಳ್ಳುತ್ತದೆ. ಅದರಲ್ಲಿ ರೋಗಿಯ ಹೆಸರು, ಲಿಂಗ, ವಯಸ್ಸು, ಮೊಬೈಲ್ ಸಂಖ್ಯೆ ಹಾಗೂ ವಿಳಾಸ ನಮೂದಿಸಿ ಲಾಗಿನ್ ಆಗಬೇಕು. ಈ ವೇಳೆ ಟೋಕನ್ ನಂಬರ್ ದೊರೆಯುವುದು. ಬಳಿಕ ಟೋಕನ್ ನಂಬರ್ ನೀಡಿ ವೈದ್ಯರನ್ನು ವಿಡಿಯೋ ಕಾಲ್ ಮೂಲಕ ಸಂಪರ್ಕಿಸಬಹುದು. ಈ ಸೇವೆ ನಿತ್ಯ ಬೆಳಿಗ್ಗೆ 10ರಿಂದ ಸಂಜೆ 4ಗಂಟೆವರೆಗೆ ಲಭ್ಯವಿರಲಿದೆ.
ಒಮ್ಮೆ ನೋಂದಣಿ ಆದವರು ಇನ್ನೊಮ್ಮೆ ನೋಂದಣಿ ಆಗುವ ಅಗತ್ಯವಿರುವುದಿಲ್ಲ. ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಯ ತಜ್ಞ ವೈದ್ಯರನ್ನು ಹಾಗೂ ವೈದ್ಯಾಧಿಕಾರಿಗಳನ್ನು ವಿಡಿಯೋ ಕಾಲ್ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಇ-ಸಂಜೀವಿನಿ ಬಳಕೆ ಕುರಿತು ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ. ಸಣ್ಣಪುಟ್ಟ ಕಾಯಿಲೆಗಳಿಗೆ ಆಸ್ಪತ್ರೆಗೆ ತೆರಳುವ ಬದಲು, ಆಪ್ ಮೂಲಕ ವೈದ್ಯರನ್ನು ಸಂಪರ್ಕಿಸುವುದು ಇದರಿಂದ ಸಾಧ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.

error: Content is protected !!