//ಉಕ್ಕು ಪ್ರಾಧಿಕಾರ ಅಧಿಕಾರಿಗಳ ಜತೆ ಭೇಟಿ, ಪರಿಶೀಲನೆ; ಅಧಿಕಾರಿಗಳ ಜತೆ ಚರ್ಚೆ//

ಭದ್ರಾವತಿ ಕಾರ್ಖಾನೆ ಭವಿಷ್ಯದ ಬಗ್ಗೆ ಶೀಘ್ರ ನಿರ್ಧಾರ ಎಂದ ಕೇಂದ್ರ ಸಚಿವರು

ಶಿವಮೊಗ್ಗ: ಭದ್ರಾವತಿಯಲ್ಲಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಭಾನುವಾರ ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದರು.

ನವದೆಹಲಿಯಿಂದ ಬೆಳಗ್ಗೆಯೇ ಭದ್ರಾವತಿಯ ಕಾರ್ಖಾನೆ ತಲುಪಿದ ಕೇಂದ್ರ ಸಚಿವರು; ಬಹಳ ಹೊತ್ತು ಇಡೀ ಕಾರ್ಖಾನೆಯನ್ನು ಸುತ್ತು ಹಾಕಿ ಪರಿಶೀಲನೆ ನಡೆಸಿದರು.

ಮುಖ್ಯವಾಗಿ ಯಂತ್ರೋಪಕರಣಗಳ ಕ್ಷಮತೆ, ಅವುಗಳ ಸದ್ಯದ ಸ್ಥಿತಿ, ಆಡಳಿತ ವ್ಯವಸ್ಥೆ, ಕಾರ್ಮಿಕರ ಸ್ಥಿತಿಗತಿಗಳ ಬಗ್ಗೆ ಬಗ್ಗೆ ಸುದೀರ್ಘ ಪರಿಶೀಲನೆ ನಡೆಸಿದರು.

ಭಾರತೀಯ ಉಕ್ಕು ಪ್ರಾಧಿಕಾರದ ಅಧ್ಯಕ್ಷ ಅಮರೆಂದು ಪ್ರಕಾಶ್ ಸೇರಿದಂತೆ ಉಕ್ಕು ಸಚಿವಾಲಯದ ಉನ್ನತ ಅಧಿಕಾರಿಗಳ ಜತೆ ಕೇಂದ್ರ ಸಚಿವರು ಕಾರ್ಖಾನೆಯ ವಿಸ್ತೃತ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಕಾರ್ಖಾನೆಯ ಹಿರಿಯ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಸಚಿವರಿಗೆ ಯಂತ್ರಗಳ ಸದ್ಯದ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು.

ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಉಕ್ಕು ಸಚಿವರು; ಹಿಂದೆ ಭದ್ರಾವತಿ, ಶಿವಮೊಗ್ಗ ಜಿಲ್ಲೆಗೆ ಮಾತ್ರವಲ್ಲ, ಇಡೀ ಕರ್ನಾಟಕದ ಕೀರ್ತಿ, ಗರಿಣೆಗೆ ಹೆಗ್ಗುರುತಾಗಿತ್ತು ಈ ಕಾರ್ಖಾನೆ. ಸರ್ ಎಂ ವಿಶ್ವೇಶ್ವರಯ್ಯ ಅವರು ಸ್ಥಾಪನೆ ಮಾಡಿದ ಕಾರ್ಖಾನೆ ಇದು.ಮೈಸೂರು ಮಹಾರಾಜರ ಕೊಡುಗೆ ಇದು. ಮೈಸೂರು ಮಹಾರಾಜರಾಗಿದ್ದ ಕೃಷ್ಣರಾಜ ಒಡೆಯರ್ ಅವರ ಮಾರ್ಗದರ್ಶನದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರು 1923ರಲ್ಲಿ ಸ್ಥಾಪನೆ ಮಾಡಿದ್ದರು. ಇಂತಹ ಪರಂಪರೆ ಇರುವ ಕಾರ್ಖಾನೆ, ಲಕ್ಷಾಂತರ ಜನರಿಗೆ ಅನ್ನ ಕೊಟ್ಟ ಕಾರ್ಖಾನೆ, ಶಿವಮೊಗ್ಗ ಮತ್ತು ಕರ್ನಾಟಕದ ಹೆಮ್ಮೆ ಆಗಿದ್ದ ಈ ಕಾರ್ಖಾನೆಯನ್ನು ಉಳಿಸಲು ಪ್ರಯತ್ನ ಆಗಬೇಕಿದೆ ಎಂದು ಹೇಳಿದರು.

ಒಳ್ಳೆಯದು ಮಾಡಲು ಪ್ರಯತ್ನಿಸುತ್ತೇನೆ

ನನ್ನ ಜತೆ ಭಾರತೀಯ ಉಕ್ಕು ಪ್ರಾಧಿಕಾರದ ಅಧ್ಯಕ್ಷರನ್ನು, ಹಿರಿಯ ಅಧಿಕಾರಿಗಳನ್ನು ಕರೆ ತಂದಿದ್ದೇನೆ. ಪ್ರಧಾನ ಮಂತ್ರಿಗಳು ನನಗೆ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಸ್ಥಾನದ ಜವಾಬ್ದಾರಿ ನೀಡಿದ್ದಾರೆ. ಎಲ್ಲಾ ಕನ್ನಡಿಗರು ಮತ್ತು ದೇವರ ದಯೆಯಿಂದ ನನಗೆ ಈ ಅವಕಾಶ ಸಿಕ್ಕಿದೆ. ಏನಾದರೂ ಒಳ್ಳೆಯ ಕೆಲಸ ಮಾಡಬಹುದೇ ಎಂದು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೇನೆ ಎಂದು ಅವರು ತಿಳಿಸಿದರು.

ಆತ್ಮನಿರ್ಬರ್ ಭಾರತ ಪರಿಕಲ್ಪನೆ ಕೈಗಾರಿಕೆ ವಲಯಕ್ಕೆ ಸಂಜೀವಿನಿ

ಪ್ರಧಾನಿಗಳ ಆತ್ಮನಿರ್ಬರ್ ಭಾರತ ಪರಿಕಲ್ಪನೆ ದೇಶೀಯ ಕೈಗಾರಿಕೆ ವಲಯಕ್ಕೆ ಸಂಜೀವಿನಿ ಆಗಿದೆ. ಆ ನಿಟ್ಟಿನಲ್ಲಿ ನಾನು, ನಮ್ಮ ಅಧಿಕಾರಿಗಳು ಕೆಲಸ ಮಾಡುತ್ತಿದ್ದೇವೆ ಎಂದರು ಅವರು.

ಕಾರ್ಮಿಕರ ನೋವು ಅರ್ಥ ಮಾಡಿಕೊಳ್ಳಬಲ್ಲೆ

ಭೇಟಿಯ ಸಂದರ್ಭದಲ್ಲಿ ಕಾರ್ಮಿಕರ ಬೇಡಿಕೆ, ಆಡಳಿತ ಮಂಡಳಿಯ ಅಹವಾಲು ಹಾಗೂ ಸ್ಥಳೀಯ ಜನರ ಮನವಿಗಳನ್ನು ಆಲಿಸಿದ್ದೇನೆ. ಕಾರ್ಖಾನೆಯಲ್ಲಿರುವ ನಾಲ್ಕು ವಿಭಾಗಗಳ ಯತ್ರೋಪಕರಣಗಳನ್ನು ವೀಕ್ಷಣೆ ಮಾಡಿದ್ದೇನೆ. ಈ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಮುಂದೆ ಈ ಬಗ್ಗೆ ಏನು ಕ್ರಮ ವಹಿಸಬೇಕು ಎಂಬ ಬಗ್ಗೆ ಚಿಂತನೆ ಮಾಡುತ್ತೇವೆ ಎಂದು ಕೇಂದ್ರ ಸಚಿವರು ಹೇಳಿದರು.

ಈಗ ಸಂಸತ್ ಕಲಾಪ ನಡೆಯುತ್ತಿದೆ. ಎಲ್ಲವನ್ನೂ ನಾನು ಹೊರಗೆ ಹೇಳುವಂತಿಲ್ಲ. ಖುದ್ದು ಪರಿಶೀಲನೆ ನಡೆಸಿ ಸಮಗ್ರ ಮಾಹಿತಿ ಸಂಗ್ರಹ ಮಾಡಿದ್ದೇನೆ. ಕಾರ್ಮಿಕರ ಕುಟುಂಬಗಳ ನೋವು ಏನು ಎಂಬುದನ್ನು ಅರ್ಥ ಮಾಡಿಕೊಂಡಿದ್ದೇನೆ. ಉನ್ನತ ಅಧಿಕಾರಿಗಳ ಜತೆ ಈ ಬಗ್ಗೆ ಸಮಾಲೋಚನೆ ನಡೆಸುತ್ತೇನೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

ಹಲವಾರು ಏಳುಬೀಳಿನ ನಡುವೆ ಕಾರ್ಖಾನೆ ಇನ್ನೂ ಉಸಿರಾಡುತ್ತಿದೆ. ಈ ಕಾರ್ಖಾನೆಯನ್ನು ಉಳಿಸಲೇಬೇಕು ಎಂದು ಸಂಸದರಾದ ಬಿ.ವೈ.ರಾಘವೇಂದ್ರ ಅವರು ಅನೇಕ ವರ್ಷಗಳಿಂದ ಪ್ರಯತ್ನ ಮಾಡುತ್ತಲೇ ಇದ್ದಾರೆ. ಮಾಜಿ ಶಾಸಕರು, ದಿವಂಗತ ಅಪ್ಪಾಜಿಗೌಡರು ಈ ನಿಟ್ಟಿನಲ್ಲಿ ಹೋರಾಟ ನಡೆಸಿದ್ದರು ಎಂದು ಕೇಂದ್ರ ಸಚಿವರು ಹೇಳಿದರು.

ನಾನು ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವನಾಗಿ ಅಧಿಕಾರ ವಹಿಸಿಕೊಂಡ ಮೇಲೆ ಕಾಂಗ್ರೆಸ್ ಪಕ್ಷದ ರಾಜ್ಯಸಭೆ ಸದಸ್ಯರಾದ ಜೈರಾಮ್ ರಮೇಶ್ ಅವರು ನನಗೆ ಐದು ಕಾರ್ಖಾನೆಗಳ ಐದು ಪ್ರಶ್ನೆಗಳನ್ನು ಕೇಳಿದ್ದರು. ಅದರಲ್ಲಿ ಭದ್ರಾವತಿ ಕಾರ್ಖಾನೆಯು ಸೇರಿದೆ. ಅದಕ್ಕೆ ಮಾಹಿತಿ ಪಡೆಯಲು ಬಂದಿದ್ದೇನೆ. ಕಾರ್ಖಾನೆಯನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲಾ ಸಾಧಕ ಬಾಧಕಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. ಸದ್ಯದಲ್ಲಿಯೇ ನಿರ್ಧಾರ ಪ್ರಕಟಿಸಲಾಗುವುದು ಎಂದು ಕೇಂದ್ರ ಸಚಿವರು ಹೇಳಿದರು.

ಕಾರ್ಖಾನೆ ಭವಿಷ್ಯದ ಬಗ್ಗೆ ಶೀಘ್ರ ನಿರ್ಧಾರ

ಸದ್ಯಕ್ಕೆ ಈ ಕಾರ್ಖಾನೆ ಭಾರತೀಯ ಉಕ್ಕು ಪ್ರಾಧಿಕಾರದ ಆಡಳಿತಕ್ಕೆ ಒಳಪಟ್ಟಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿಗಳ ಆತ್ಮನಿರ್ಭರ್ ಭಾರತ್, ಮೆಕ್ ಇನ್ ಇಂಡಿಯಾ ಪರಿಕಲ್ಪನೆಗಳ ಅಡಿಯಲ್ಲಿ ಚಿಂತನೆ ಮಾಡುತ್ತೇವೆ. ಅಲ್ಲದೆ, 2017ರಲ್ಲಿ ರೂಪಿಸಿರುವ ಉಕ್ಕು ನೀತಿಯನ್ವಯ ಕ್ರಮ ವಹಿಸಬಹುದೇ ಎಂಬ ಬಗ್ಗೆಯೂ ಆಲೋಚನೆ ಮಾಡುತ್ತೇವೆ ಎಂದು ಕೇಂದ್ರ ಸಚಿವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಮಾಡಬೇಕು ಎನ್ನುವುದು ಪ್ರಧಾನಿಗಳ ಕನಸು. ಆ ಗುರಿ ಮುಟ್ಟಲಿಕ್ಕೆ ಈಗಾಗಲೇ ಅನೇಕ ಕಾರ್ಯಕ್ರಮಗಳಿಗೆ ಚಾಲನೆ ಕೊಡಲಾಗಿದೆ ಎಂದರು ಅವರು.

ಸಂಸದರಾದ ಬಿ.ವೈ.ರಾಘವೇಂದ್ರ, ಶಾಸಕರಾದ ಶಾರದಾ ಪೂರ್ಯ ನಾಯಕ್, ಜೆಡಿಎಸ್ ನಾಯಕಿ ಶಾರದಾ ಅಪ್ಪಾಜಿ ಗೌಡ ಮುಂತಾದವರು ಜತೆಯಲ್ಲಿ ಇದ್ದರು.

ಎಮ್ಮಿಹಟ್ಟಿ ಗ್ರಾಮಕ್ಕೆ ಸಚಿವರ ಭೇಟಿ

ಹಾವೇರಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಭದ್ರಾವತಿ ತಾಲೂಕಿನ ಎಮ್ಮಿಹಟ್ಟಿ ಗ್ರಾಮದ ಮೃತರ ಮನೆಗಳಿಗೆ ಭೇಟಿ ನೀಡಿದ ಕೇಂದ್ರ ಸಚಿವರು, ನೊಂದ ಕುಟುಂಬಗಳ ಸದಸ್ಯರಿಗೆ ಸಾಂತ್ವನ ಹೇಳಿದರು.

ಅಲ್ಲದೆ, ಕುಟುಂಬಗಳಿಗೆ ಅಗತ್ಯ ನೆರವಿನ ಭರವಸೆ ಕೊಟ್ಟ ಅವರು, ಮಕ್ಕಳ ವಿದ್ಯಾಭ್ಯಾಸ ಹಾಗೂ ಉದ್ಯೋಗಕ್ಕೆ ನೆರವಾಗುವುದಾಗಿ ಹೇಳಿದರು.

ಯಡಿಯೂರಪ್ಪ ಅವರ ಮನೆಗೆ ಭೇಟಿ

ಕಾರ್ಖಾನೆ ಭೇಟಿಯ ನಂತರ ಕೇಂದ್ರ ಸಚಿವರು ಮಾಜಿ ಮುಖ್ಯಮಂತ್ರಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾದ ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ಕೊಟ್ಟರು.

ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಪುತ್ರರು, ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರು ಕೇಂದ್ರ ಸಚಿವರನ್ನು ಬರಮಾಡಿಕೊಂಡರು.

ಬಳಿಕ ಯಡಿಯೂರಪ್ಪ ಅವರ ಕುಟುಂಬದ ಸದಸ್ಯರು ಕುಮಾರಸ್ವಾಮಿ ಅವರನ್ನು ಆತ್ಮೀಯವಾಗಿ ಗೌರವಿಸಿದರು. ಇಬ್ಬರೂ ನಾಯಕರು ಮಾತುಕತೆ ನಡೆಸಿದರು.

error: Content is protected !!