ಶಿವಮೊಗ್ಗ: ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಶಿಕ್ಷಣದ ಜತೆಯು ಕೌಶಲ್ಯ ಅತ್ಯಂತ ಮುಖ್ಯ ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಹೇಳಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಅಡ್ವಾನ್ಸ್ಡ್‌ ಸ್ಕಿಲ್ ಡೆವಲಪ್‌ಮೆಂಟ್ ಅಕಾಡೆಮಿ ಮತ್ತು ವಿಸ್ಟಾ ತಂತ್ರಜ್ಞಾನ ಸಂಸ್ಥೆಯಿಂದ ಆಯೋಜಿಸಿದ್ದ ವೃತ್ತಿ ಕೌಶಲ್ಯ ಮಾರ್ಗದರ್ಶನ ತರಬೇತಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ವಿತರಣಾ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಸ್ಕಿಲ್ ಅಕಾಡೆಮಿ ಶಿವಮೊಗ್ಗದಲ್ಲಿ ಆರಂಭವಾಗಿರುವುದು ಹೆಮ್ಮೆಯ ವಿಚಾರವಾಗಿದ್ದು, ಸ್ಕಿಲ್ ಅಕಾಡೆಮಿಯು ಯುವಜನರಿಗೆ ಅಗತ್ಯವಿರುವ ಕೌಶಲ್ಯಗಳನ್ನು ಕಲಿಸುವ ಮೂಲಕ ಉತ್ತಮ ಸಾಧನೆ ಮಾಡಲು ಪ್ರೇರೆಪಿಸಬೇಕು ಎಂದು ತಿಳಿಸಿದರು.

ವೃತ್ತಿ ಜೀವನದಲ್ಲಿ ಉನ್ನತ ಹಂತಕ್ಕೆ ತಲುಪಲು ಹೆಚ್ಚಿನ ಮಟ್ಟದ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಶಿಕ್ಷಣದ ಜತೆಯಲ್ಲಿ ಕೌಶಲ್ಯವಿದ್ದರೆ ಅದ್ಭುತ ಸಾಧನೆ ಮಾಡಬಹುದು. ತಾವು ಆಸಕ್ತಿ ಹೊಂದಿರುವ ಕ್ಷೇತ್ರದಲ್ಲಿ ಯಾವ ಕೌಶಲ್ಯ ಅಗತ್ಯ ಎಂಬುದನ್ನು ಆರಂಭದಲ್ಲಿ ಮನಗಾಣಬೇಕು. ನನ್ನ ಜೀವನದಲ್ಲಿ ನಾನು ಕೌಶಲ್ಯಕ್ಕೆ ಆದ್ಯತೆ ನೀಡಿದ್ದರಿಂದ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ 50 ಜನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಕಾರದಲ್ಲಿ ವಿಸ್ಟಾ ಸಂಸ್ಥೆಯಿಂದ ಸ್ಕಾಲರ್‌ಶಿಪ್ ನೀಡಲಾಯಿತು. 15 ಜನರಿಗೆ 20 ಸಾವಿರ ರೂ., 15 ಜನರಿಗೆ 10 ಸಾವಿರ ರೂ. ಹಾಗೂ 20 ಜನರಿಗೆ 5 ಸಾವಿರ ರೂ. ಸ್ಕಾಲರ್‌ಶಿಪ್ ನೀಡಲಾಯಿತು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಯುವಜನರು ಕೌಶಲ್ಯ ಕಲಿಕೆಗೆ ಶಿಕ್ಷಣದ ಅವಧಿಯಲ್ಲೇ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಇದರಿಂದ ಉದ್ಯೋಗ ಕ್ಷೇತ್ರದಲ್ಲಿ ವೇಗಗತಿಯಲ್ಲಿ ಪ್ರಗತಿ ಸಾಧಿಸಲು ಸಾಧ್ಯ. ಶಿವಮೊಗ್ಗ ಜಿಲ್ಲೆಯಲ್ಲಿ ಉದ್ಯಮ ಆರಂಭಿಸಲು ಪೂರಕ ವಾತಾವರಣ ಇದ್ದು, ಯುವಜನತೆ ಉದ್ಯಮ ಆರಂಭಿಸಿ ಉದ್ಯೋಗ ಅವಕಾಶ ಸೃಷ್ಟಿಸಬೇಕು ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ಶಂಕರನಾರಾಯಣ, ಡಾ. ರಜನಿ ಪೈ, ಎಸ್.ಎನ್.ನಾಗರಾಜ, ಪೂರ್ಣಿಮಾ, ವಿಸ್ಟಾ ಸಂಸ್ಥೆಯ ಎ.ಎಸ್.ವಿನಯಕುಮಾರ್, ಸಂಜಯಕುಮಾರ್, ಪದಾಧಿಕಾರಿಗಳು ಹಾಜರಿದ್ದರು.

error: Content is protected !!