ಶಿವಮೊಗ್ಗ,ಜು.17: ಗೋವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪದಲ್ಲಿ ಬಡವರಿಗಾಗಿ ನಿರ್ಮಿಸಿರುವ ಮನೆಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ ಫಲಾನುಭವಿಗಳಿಗೆ ವಿತರಿಸಬೇಕು ಎಂದು ಆಗ್ರಹಿಸಿ ಜು.18ರಂದು ಬೆಳಿಗ್ಗೆ 10ಕ್ಕೆ ರಾಮಣ್ಣಶೆಟ್ಟಿ ಪಾರ್ಕ್‍ನಿಂದ ಬೃಹತ್ ಜನಾಗ್ರಹಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಮಗೆ ಸೂರು ಸಿಗುತ್ತದೆ ಎಂದುಕೊಂಡು ಗೋವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪದಲ್ಲಿ ಮನೆಗಳಿಗಾಗಿ ಸಾರ್ವಜನಿಕರು ಮುಗಂಡ ಹಣ ನೀಡಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ ಇದುವರೆಗೂ ಮನೆಗಳ ನಿರ್ಮಾಣ ಮತ್ತು ವಿತರಣೆ ಸರಿಯಾಗಿ ಆಗಿಲ್ಲ. ವಿಳಂಬವಾಗುತ್ತಿದೆ. ಸರ್ಕಾರದ ಗಮನಸೆಳೆಯಲು ಈ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.
3000 ಮನೆಗಳಲ್ಲಿ ಕೇವಲ 288 ಮನೆಗಳನ್ನು ಮಾತ್ರ ನೀಡಲಾಗಿದೆ. ಜುಲೈ ಮತ್ತು ಆಗಸ್ಟ್ ತಿಂಗಳ ಅಂತ್ಯಕ್ಕೆ ಉಳಿದೆಲ್ಲ ಮನೆಗಳನ್ನು ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಕೊಟ್ಟ ಮಾತಿಗೆ ನಡೆದುಕೊಂಡಿಲ್ಲ. ಈ ಬಗ್ಗೆ ವಸತಿ ಸಚಿವರನ್ನು ಕೂಡ ಭೇಟಿ ಮಾಡಿದ್ದೆವು. ಅವರು ನಮ್ಮ ಮನವಿಗೆ ಸ್ಪಂದಿಸಿದ್ದರು. ಆದರೆ ಇನ್ನೂ ಮನೆ ವಿತರಣೆಗೆ ಕ್ರಮ ಕೈಗೊಂಡಿಲ್ಲ ಎಂದರು.
ಸುಮಾರು 7.77 ಲಕ್ಷ ರೂ.ಗಳಿಗೆ ಮನೆ ಸಿಕ್ಕಂತಾಗುತ್ತದೆ. ಇದಕ್ಕೆ ಸುಮಾರು 3.80ಯಷ್ಟು ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಸಬ್ಸಿಡಿ ಸಿಗುತ್ತದೆ. ಸಾಲಕೂಡ ಬ್ಯಾಂಕಿನಿಂದ ನೀಡಲಾಗುತ್ತದೆ. ಈಗಾಗಲೇ ಮನೆಗಾಗಿ ಫಲಾನುಭವಿಗಳು ಪರಿಶಿಷ್ಟರು 50 ಸಾವಿರ, ಇತರೆಯವರು 80 ಸಾವಿರ ಹಣವನ್ನು ಸಾಲಸೋಲ ಮಾಡಿ ಕಟ್ಟಿದ್ದಾರೆ. ಬಡ್ಡಿ ಕಟ್ಟಲಾಗದೆ, ಸಂಕಷ್ಟದಲ್ಲಿದ್ದಾರೆ. ಇತ್ತ ಮನೆಯೂ ಇಲ್ಲದೆ, ಬಡ್ಡಿ ಕಟ್ಟುವುದು ತಪ್ಪದೆ ಸೂರಿಗಾಗಿ ನಿಟ್ಟುಸಿರು ಬಿಡುತ್ತಿದ್ದಾರೆ. ವಸತಿ ಸಚಿವರು ತಕ್ಷಣವೇ ಇದನ್ನು ಗಮನಿಸಬೇಕು ಎಂದರು.
ರಾಮಣ್ಣಶೆಟ್ಟಿ ಪಾರ್ಕ್‍ನಿಂದ ಬೆಳಿಗ್ಗೆ 10ಕ್ಕೆ ಗಾಂಧಿಬಜಾರ್ ನೆಹರು ರಸ್ತೆಯ ಮೂಲಕ ಜಾಥಾ ಹೊರಟು, ಸೀನಪ್ಪ ಶೆಟ್ಟಿ ವೃತ್ತ(ಗೋಪಿ ವೃತ್ತ)ದಲ್ಲಿ ಸಭೆ ನಡೆಸಲಾಗುವುದು. ಅಲ್ಲಿಂದ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಈ ಜಾಥಾಕ್ಕೆ ಫಲಾನುಭವಿಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ಮಳೆ ಬರುವ ನಿರೀಕ್ಷೆ ಇರುವುದರಿಂದ ಜೊತೆಗೆ ಕೊಡೆಯನ್ನು ತರಬೇಕು ಎಂದು ಮನವಿ ಮಾಡಿದರು.
ಇದಲ್ಲದೆ ಜನಪ್ರತಿನಿಧಿಗಳಿಲ್ಲದೆ ಅಭಿವೃದ್ಧಿ ಕುಂಠಿತವಾಗಿದೆ. ಶಿವಮೊಗ್ಗ ಮಹಾನಗರಪಾಲಿಕೆಗೆ ತಕ್ಷಣವೇ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕು. ವಾರ್ಡ್‍ಗಳ ಹೆಚ್ಚಳ ಇತ್ಯಾದಿಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಈಗಿರುವ ಸ್ಥಿತಿಯಲ್ಲಿಯೇ ಚುನಾವಣೆ ನಡೆಸಬೇಕು ಎಂದರು.
ಕಾಂಗ್ರೆಸ್ ಸರ್ಕಾರ ಪರಿಶಿಷ್ಟರನ್ನು ಕಡೆಗಾಣಿಸುತ್ತಿದೆ. ಸಿದ್ದರಾಮಯ್ಯ ನವರು ಅಹಿಂದ ನಾಯಕರಾಗಿ ಉಳಿದಿಲ್ಲ. ವಾಲ್ಮೀಕಿ ನಿಗಮದಲ್ಲಿ ಆದ ಭ್ರಷ್ಟಚಾರವೇ ಇದಕ್ಕೆ ಉದಾಹರಣೆಯಾಗಿದೆ. ಕಾಂಗ್ರೆಸ್ ಎಂದರೆ ಲೂಟಿಕೋರರ ಒಂದು ಗುಂಪು ಎಂದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಈ.ವಿಶ್ವಾಸ್, ಎಂ. ಶಂಕರ್, ಸುವರ್ಣ ಶಂಕರ್, ಶಂಕರ್, ಬಾಲು, ಗನ್ನಿ ಶಂಕರ್, ಕಾಚಿನಕಟ್ಟೆ ಸತ್ಯನಾರಾಯಣ, ಮಹಾಲಿಂಗಶಾಸ್ತ್ರಿ, ಮೋಹನ್, ನಾಗರಾಜ್, ವಾಗೀಶ್, ಶ್ರೀಕಾಂತ್, ಜಾಧವ್ ಮತ್ತಿತರರು ಇದ್ದರು.

error: Content is protected !!