ರಸ್ತೆ ಸುರಕ್ಷತೆಗೆ ಬಂತು ‘ಸ್ಮಾರ್ಟ್‌ ಹೆಲ್ಮೆಟ್‌’

ಶಿವಮೊಗ್ಗ: ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ರಸ್ತೆ ಅಪಘಾತಗಳು ಸಾವು ನೋವುಗಳು ಹೆಚ್ಚುತ್ತಲೆ ಇವೆ. ಅದರಲ್ಲು ಹೆಚ್ಚಾಗಿ ತಲೆಗೆ  ಪೆಟ್ಟುಬಿದ್ದು ಸಾವಿಗೀಡಾದ ಸಂಖ್ಯೆಯೇ ಜಾಸ್ತಿ. ಅಂತಹ ಅಪಘಾತಗಳಿಂದ ತಲೆಗೆ ರಕ್ಷಣೆ ನೀಡುವ, ರಸ್ತೆ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುವಂತಹ ಹಾಗೂ ಅಪಘಾತವಾದ ತುರ್ತು ಪರಿಸ್ಥಿಯಲ್ಲಿ ವ್ಯಕ್ತಿಯ ಸಂಬಂಧ ಪಟ್ಟವರಿಗೆ ತಿಳಿಸುವ ಐಓಟಿ ತಂತ್ರಜ್ಞಾನ ಆಧಾರಿತ ಸ್ಮಾರ್ಟ್‌ ಹೆಲ್ಮೆಟ್‌ ಒಂದನ್ನು ಜೆ.ಎನ್.ಎನ್.ಸಿ.ಇ ವಿದ್ಯಾರ್ಥಿಗಳು ರೂಪಿಸಿದ್ದಾರೆ.

ನಗರದ ಜೆ.ಎನ್.ಎನ್‌ ಎಂಜಿನಿಯರಿಂಗ್‌ ಕಾಲೇಜಿನ ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯುನಿಕೇಷನ್‌ ಇಂಜಿನಿಯರಿಂಗ್‌ ವಿಭಾಗದ ವತಿಯಿಂದ ಬುಧವಾರ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಎಲೆಕ್ಟ್ರಾನಿಕ್ಸ್‌ ತಾಂತ್ರಿಕ ಪ್ರಯೋಗಗಳ ಅನಾವರಣ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಪ್ರಜ್ವಲ್.ಎಸ್.ಎಲ್‌, ಉದಿತ್‌ ಎಂ.ಡಿ, ಶ್ರೀಕೃಷ್ಣ ಕಂಠಿ, ಮೊಹಮದ್‌ ಶೇಕ್‌ ಅವರ ತಂಡ ಸಹ ಪ್ರಾದ್ಯಾಪಕಿ ರೂಪಾ.ಬಿ.ಎಸ್‌ ಮಾರ್ಗದರ್ಶನದಲ್ಲಿ ರೂಪಿಸಿದ ‘ಸ್ಮಾರ್ಟ್‌ ಹೆಲ್ಮೆಟ್‌ ಫಾರ್‌ ಅಡ್ವಾನ್ಸ್ಡ್‌ ಅಸಿಸ್ಟೆನ್ಸ್‌ ಅಂಡ್‌ ಸೇಫ್ಟಿ’ ಪ್ರಾತ್ಯಕ್ಷಿಕೆ ಸುರಕ್ಷಿತ ವಾಹನ ಚಾಲನೆಗೆ ಹೊಸ ಸ್ಪರ್ಶ ನೀಡಿತ್ತು.

ಈ ಹೆಲ್ಮೆಟ್‌ ಧರಿಸಿ ವಾಹನ ಚಾಲನೆ ಮಾಡುವುದರಿಂದ ಹಿಂದೆ ಬರುವ ಇತರೆ ವಾಹನಗಳನ್ನು ಚಿಕ್ಕ ಪರದೆಯ ಮೂಲಕ ಸವಾರರು ನೋಡಬಹುದಾಗಿದೆ.  ಇದರೊಂದಿಗೆ ಅಪಘಾತವಾದ ಸಂದರ್ಭದಲ್ಲಿ ಅಪಘಾತಗೊಂಡ ನಿಖರ ಸ್ಥಳದ ಮಾಹಿತಿಯನ್ನು ಅಪಘಾತಕ್ಕಿಡಾದ ವ್ಯಕ್ತಿಯ ಸಂಬಂಧಿಕರಿಗೆ ತಲುಪುವಂತೆ ರೂಪಿಸಲಾಗಿದೆ. ಐಓಟಿ ತಂತ್ರಜ್ಞಾನದೊಂದಿಗೆ ರಾಸ್ಬೆರಿ ಪೈ ಮತ್ತು ಅರ್ಡಿನೊ ಮೈಕ್ರೊ ಕಂಟ್ರೊಲರ್‌ ಬಳಸಿ ಹೆಲ್ಮೆಟ್‌ ರೂಪಿಸಲಾಗಿದ್ದು ಮೂರು ತಿಂಗಳ ನಿರಂತರ ಪ್ರಯೋಗಗಳು ನಡೆಸಿದ್ದೆವೆ ಎನ್ನುತ್ತಾರೆ ವಿದ್ಯಾರ್ಥಿಗಳ ತಂಡ.

ಐಓಟಿ ಮೂಲಕ ಮೊಬೈಲ್‌ ಮೂಲಕವೇ ಸ್ವಯಂಚಾಲಿತವಾಗಿ ಅಡಿಕೆ ಬೇಯಿಸುವ ಮತ್ತು ಒಣಗಿಸುವ ಯೋಜನಾ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಾದ ಮೊಹಮದ್‌ ಫೌಜಾನ್‌, ಚಂದನ್.ಆರ್.ಎಸ್‌, ಸೈಯದ್‌ ಮೊಹಮದ್‌ ನಯಾಜ್‌ ತಂಡ ಸಹಾಯಕ ಪ್ರಾಧ್ಯಾಪಕಿ ಪ್ರೇಮಾ.ಕೆ.ಎನ್ ಅವರ ಮಾರ್ಗದರ್ಶನದಲ್ಲಿ ರೂಪಿಸಿ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದರು. ಇದರೊಂದಿಗೆ ಡೀಪ್‌ ಲರ್ನಿಂಗ್‌ ಮೂಲಕ ಇನ್‌ಫ್ಯಾಟ್ಸ್‌ ಕ್ರೈ ರೆಸ್ಪಾನ್ಸ್‌, ಅಂಧರಿಗಾಗಿ ಫೇಕ್‌ ಕರೆನ್ಸಿ ರೆಕಗ್ನಿಷನ್ ಸಿಸ್ಟಮ್‌, ವಿಶುಯಲ್‌ ಕ್ರಿಪ್ಟೊಗ್ರೆಫಿ ಸ್ಕೀಮ್‌ ಡಿಸೈನ್‌ ಬೇಸಡ್‌ ಆನ್‌ ಕ್ಯೂಆರ್‌ ಕೋಡ್‌, ಲೈಫೈ ಮೂಲಕ ಡೇಟಾ ಟ್ರಾನ್ಸ್‌ಮಿಷನ್‌, ಮೊಬೈಲ್‌ ನಲ್ಲಿರುವ ತಾಂತ್ರಿಕ ಗುಣಲಕ್ಷಣಗಳನ್ನು ವಿದ್ಯಾರ್ಥಿಗಳಿಗೆ ತಿಳಿ ಹೇಳುವ ಜಿಎಸ್‌ಎಂ ಮಾಡೆಲ್‌ ಹೊಂದಿದ ಸೆಲ್‌ ಫೋನ್‌, ಬ್ರೈನ್‌ ಕಂಟ್ರೋಲ್ಡ್‌ ರೊಬೊಟಿಕ್‌ ಕಾರು, ಕೃತಕ ಬುದ್ದಿಮತ್ತೆ ಮೂಲಕ ಕ್ಷ-ಕಿರಣದಿಂದ ಶ್ವಾಸಕೋಶ ಕ್ಯಾನ್ಸರ್‌ ಪತ್ತೆ ಮಾಡುವ ತಂತ್ರಜ್ಞಾನ ಸೇರಿದಂತೆ ವಿದ್ಯಾರ್ಥಿಗಳ ನಾವೀನ್ಯ ಪ್ರಯೋಗಗಳು ನೋಡುಗರನ್ನು ಆಕರ್ಷಿಸಿತು.
***
ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕಿ ಡಾ.ಶೀಲಾ.ಎಸ್‌ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ವರುಣ.ಹೆಚ್‌, ಸುಮಂತ್.ಯು, ಪುರುಷೋತ್ತಮ್‌, ಯುವರಾಜ್‌ ತಂಡ ರೂಪಿಸಿದ ಡಿಸೈನ್‌ ಸಿಮ್ಯುಲೇಷನ್‌ ಅಂಡ್‌ ಲೇಔಟ್‌ ಆಫ್‌ ಲೋ ಡ್ರಾಪ್‌ ಔಟ್‌ ಓಲ್ಟೇಜ್‌ ರೆಗ್ಯುಲೇಟರ್ (ಪ್ರಥಮ ಬಹುಮಾನ),  ಡಾ.ಶ್ವೇತಾ.ಹೆಚ್.ಆರ್‌ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಅಂಕಿತಾ.ಬಿ, ರತ್ನಾ.ಹೆಚ್.ಜಿ, ಗಗನಾ, ಮೊಹಮದ್‌ ಇಸ್ಮಾಯಿಲ್‌ ತಂಡ ರೂಪಿಸಿದ ಆಟೊಮೆಟೆಡ್‌ ರೆಸ್ಪಾನ್ಸ್‌ ಅಂಡ್‌ ಕ್ಲಾಸಿಫಿಕೇಷನ್‌ ಆಫ್‌ ಇನ್ ಫ್ಯಾಂಟ್ಸ್ ಕ್ರೈ(ದ್ವಿತೀಯ ಬಹುಮಾನ), ಸ್ಮಾರ್ಟ್‌ ಹೆಲ್ಮೆಟ್‌ ಫಾರ್‌ ಅಡ್ವಾನ್ಸ್ಡ್‌ ಅಸಿಸ್ಟೆನ್ಸ್‌ ಅಂಡ್‌ ಸೇಫ್ಟಿ (ತೃತೀಯ ಬಹುಮಾನ) ಪಡೆದಿದೆ.
***
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್‌, ಸಂಶೋಧನಾ ಡೀನ್‌ ಡಾ.ಎಸ್.ವಿ.ಸತ್ಯನಾರಾಯಣ, ಏಕತ್ವ ಇನೊವೇಷನ್‌ ಕಂಪನಿ ಸಿಇಓ ವಿಕಾಸ್.ಹೆಚ್.ಸಿ, ಕ್ಯಾಡೆನ್ಸ್‌ ಡಿಸೈನ್‌ ಸಿಸ್ಟಮ್‌ ಇಂಜಿನಿಯರ್‌ ಸಂಜಯ್.ಎ.ಸಿ, ಸಂಯೋಜಕರಾದ ಡಾ.ಪ್ರಮೋದ್‌ ಕುಮಾರ್.ಎಸ್, ಎಸ್.ಡಿ.ನಳೀನಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

error: Content is protected !!