ಮಾತು ಸಾಧನೆ ಆಗದಿರಲಿ, ಸಾಧನೆ ಮಾತಾಗಲಿ

ಉಪಸಭಾಪತಿ ಎಂ.ಕೆ. ಪ್ರಾಣೇಶ್ ಹೇಳಿಕೆ

ಚಿಕ್ಕಮಗಳೂರು : ಮಾತು ಸಾಧನೆ ಆಗಬಾರದು, ಸಾಧನೆ ಮಾತಾಗಬೇಕು, ಈ ನಿಟ್ಟಿನಲ್ಲಿ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾವು ಅನುಸರಿಸಬೇಕು ಎಂದು ಉಪಸಭಾಪತಿ ಎಂ.ಕೆ. ಪ್ರಾಣೇಶ್ ಹೇಳಿದರು.
ಜಿಲ್ಲಾ ಬಿಜೆಪಿ ವತಿಯಿಂದ ಮಂಗಳವಾರ ನೂತನ ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಪಕ್ಷಕ್ಕೆ ಸೋಲಾಯಿತು, ಇದಕ್ಕೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ, ಆದರೆ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಹಾಗೂ ವಿಧಾನ ಪರಿಷತ್ ನಲ್ಲಿ ಭಾರೀ ಅಂತರದಲ್ಲಿ ಗೆಲ್ಲಿಸುವ ಮೂಲಕ ಕಾರ್ಯಕರ್ತರು ಹಾಗೂ ಮತದಾರರು ಮನ್ನಣೆ ನೀಡಿದ್ದಾರೆ, ವಿದ್ಯಾವಂತರು, ಪ್ರಜ್ಞಾವಂತರು ಹಾಗೂ ಜನ ಸಾಮಾನ್ಯರ ನಿರೀಕ್ಷೆಗಳನ್ನು ಚುನಾಯಿತರು ಈಡೇರಿಸಬಲ್ಲರು ಎಂಬ ವಿಶ್ವಾಸವಿದೆ ಎಂದರು.


ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರು ಮಾತನಾಡಿ, ಕಾಂಗ್ರೆಸ್ ಗೆ ಈ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಿದ್ದಾರೆ, ಜನರು ಹಾಗೂ ಶಿಕ್ಷಕರಿಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಸದನದಲ್ಲಿ ಚರ್ಚಿಸಿ, ಪರಿಹಾರ ನೀಡಲು ಬದ್ಧನಿರುವೆ, ಹಾಗೆಯೇ ನಿಮ್ಮೆಲ್ಲರ ಧ್ವನಿಯಾಗಿ ಸಧನದ ಒಳಗೆ ಮತ್ತು ಹೊರಗೆ ಪಾವಿತ್ರ್ಯತೆಯನ್ನು ಕಾಪಾಡುವೆ ಎಂದರು.
ನೈರುತ್ಯ ಪದವೀಧರ ಕ್ಷೇತ್ರಕ್ಕೆ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಅವರು ಮಾತನಾಡಿ, ಇದು ಎಲ್ಲರ ಪ್ರಯತ್ನದ ಗೆಲುವು, ಕಾರ್ಯಕರ್ತರ ಶಕ್ತಿಯ ಗೆಲುವು, ಇದು ಪದವೀಧರರ ಗೆಲುವು. ನಮ್ಮ ಪಕ್ಷದ ಸಂಘಟನೆ ಕೇಂಧ್ರ ಬಿಂದುವೇ ಕಾರ್ಯಕರ್ತರು, ಅವರ ಹುಮ್ಮಸ್ಸು, ಹುರುಪು, ಯಾವ ಪಕ್ಷದಲ್ಲೂ ಕಾಣಲು ಸಾಧ್ಯವಿಲ್ಲ ಎಂದ ಅವರು, ನಿಷ್ಟಾವಂತ ಕಾರ್ಯಕರ್ತರೂ ಬೆಳೆಯಬೇಕು, ಅವರನ್ನು ಬೆಳೆಸಬೇಕು, ಹಾಗೆಯೇ ಜನರು ಹಾಗೂ ಪದವೀಧರ ಮತದಾರರು ಪ್ರೀತಿ, ವಿಶ್ವಾಸದಿಂದ ಹರಸಿದ್ದಾರೆ, ಅವರ ನಿರೀಕ್ಷೆಗಳಿಗೆ ತಕ್ಕಂತೆ ಪ್ರಾಮಾಣಿಕ ಸೇವೆ ಸಲ್ಲಿಸುವುದಾಗಿ ಹೇಳಿದರು.
ನೂತನ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ವಿಧಾನ ಪರಿಷತ್ ಗೆ ನೂತನವಾಗಿ ಆಯ್ಕೆಯಾದ ಸಿ.ಟಿ.ರವಿ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ ಶೆಟ್ಟಿ, ಬಿಜೆಪಿ ಪ್ರಮುಖರಾದ ರಂಗನಾಥ್, ನಗರ ಅಧ್ಯಕ್ಷ ಪುಷ್ಪರಾಜ್, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಲ್ಮುರಡಪ್ಪ, ಬಿಜೆಪಿ ಮುಖಂಡರಾದ ಪ್ರೇಮ್ ಕುಮಾರ್ ಸೇರಿದಂತೆ ಪದಾಧಿಕಾರಿಗಳು, ನಗರ ಮತ್ತು ಮಂಡಲ ಅಧ್ಯಕ್ಷರು ಹಾಗೂ ನೂರಾರು ಕಾರ್ಯಕರ್ತರು ಹಾಜರಿದ್ದರು. ಇದಕ್ಕೂ ಮೊದಲು ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

error: Content is protected !!