ಶಿವಮೊಗ್ಗ,ಸೆ.14: ಇಂದು ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಶ್ರೀಭಗಿರಥ ಸಹಕಾರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಡಿಸಿಸಿ ಬ್ಯಾಂಕ್ ಹಾಗೂ ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಮಾತನಾಡಿ 119 ವರ್ಷಗಳ ಹಿಂದೆಯೇ ಸಹಕಾರ ಸಂಘ ಆರಂಭಗೊಂಡಿತು. ಅಂದಿನ ಹಿರಿಯರು ಬಡವರ ಮೇಲಿನ ಸಾಲದ ಹೊರೆಯನ್ನು ತಗ್ಗಿಸಲು ಮತ್ತು ಸಾಹುಕಾರರ ಕಪಿಮುಷ್ಟಿಯಿಂದ ತಪ್ಪಿಸಿಕೊಳ್ಳುವಂತೆ ಮಾಡುವ ಉದ್ದೇಶದಿಂದ ಈ ಸಂಘವನ್ನು ಸ್ಥಾಪಿಸಲಾಯಿತು. ಆದರೆ ಇಂದು ಇದು ದೇಶದಲ್ಲೇಯೇ ಆರ್ಥಿಕ ಬದ್ಧತೆಯನ್ನು ಒದಗಿಸಿದೆ ಎಂದರು.
ವಾಣಿಜ್ಯ ಬ್ಯಾಂಕ್‍ಗಳೇ ದಿವಾಳಿಯಾಗುವ ಈ ಹೊತ್ತಿನಲ್ಲಿ ದೇಶದ ಆರ್ಥಿಕ ಸ್ಥಿತಿಯನ್ನು ಸೀಮಿತದಲ್ಲಿ ಇಟ್ಟುಕೊಳ್ಳಲು ಸಹಕಾರ ಸಂಘಗಳು ಕಾರಣವಾಗಿದೆ. ಅಷ್ಟೇ ಅಲ್ಲದೇ ಬಡವರಿಗೆ ಆರ್ಥಿಕ ಸಹಾಯ ಮಾಡಿ ಅವರ ಜೀವನ ಬದ್ಧತೆಯನ್ನು ಹೆಚ್ಚಿಸುತ್ತಿವೆ ಎಂದರು.
ವಾಣಿಜ್ಯ ಬ್ಯಾಂಕ್‍ಗಳು ಬಂಡವಾಳಶಾಹಿಗಳತ್ತ ಮುಖ ಮಾಡುತ್ತಿವೆ. ಆದರೆ ಸಹಕಾರ ಸಂಘಗಳು ಬಡವರತ್ತ ಸಾಗಿವೆ. ಎನ್.ಮಂಜುನಾಥ್ ಅವರು ತಮ್ಮ ಭಗಿರಥ ಪ್ರಯತ್ನದಿಂದ ಸಹಕಾರ ಸಂಘವನ್ನು ಕಟ್ಟಿದ್ದಾರೆ. ಇದಕ್ಕಾಗಿ ಅವರು ಬಹಳ ಕಷ್ಟ ಪಟ್ಟಿದ್ದಾರೆ. ಒಂದು ಸಹಕಾರ ಸಂಘದ ಉದ್ಘಾಟನಾ ಸಮಾರಂಭಕ್ಕೆ ಇಷ್ಟೊಂದು ಜನರು ಭಾಗವಹಿಸುರುವುದು ಇದೇ ಮೊದಲು ಎಂದರು.
ಕೆಲವು ವರ್ಷಗಳ ಹಿಂದೆ ವಿಶ್ವದಲ್ಲಿ ಆರ್ಥಿಕ ಹಿಂಜರಿಕೆ ಉಂಟಾದ ಸಂದರ್ಭದಲ್ಲಿ ಅನೇಕ ರಾಷ್ಟ್ರಗಳಲ್ಲಿ ಆರ್ಥಿಕ ಸಂಕಷ್ಟ ಉಂಟಾಯಿತು. ಆದರೆ ಭಾರತದಂತಹ ರಾಷ್ಟ್ರದಲ್ಲಿ ಈ ಸಮಸ್ಯೆ ಉಲ್ಬಣಿಸಲಿಲ್ಲ. ಕಾರಣ ಇಲ್ಲಿನ ಸಹಕಾರ ವ್ಯವಸ್ಥೆ ಆರ್ಥಿಕ ಸಂಕಷ್ಟಕ್ಕೆ ಆಸ್ಪದ ನೀಡಲಿಲ್ಲ ಎಂದರು.
ಸಮಾಜದ ಋಣ ತೀರಿಸುವ ಕೆಲಸವನ್ನು ಸಹಕಾರ ಸಂಘ ಸ್ಥಾಪಿಸುವ ಮೂಲಕ ಎನ್.ಮಂಜುನಾಥ್ ಕೈಗೊಂಡಿದ್ದಾರೆ. 700ಕ್ಕೂ ಅಧಿಕ ಸದಸ್ಯರನ್ನು 15 ಲಕ್ಷ ಬಂಡವಾಳವನ್ನು ಹೊಂದುವ ಮೂಲಕ ಸಹಕಾರ ಸಂಘ ಸ್ಥಾಪಿಸುವುದು ಪ್ರಸ್ತುತ ದಿನಮಾನಗಳಲ್ಲಿ ಸುಲಭದ ಮಾತಲ್ಲ. ಸಮಾಜದಲ್ಲಿನ ಬಡವರಿಗೆ ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶದಿಂದ ಈ ಸಂಘ ಮುಂದಿನ ದಿನಗಳಲ್ಲಿ ಯಶಸ್ಸಿನ ಹಾದಿಯನ್ನು ತುಳಿಯಲಿ ಎಂದು ಆಶಿಸಿದರು.
ಪ್ರತಿಭಾ ಪುರಸ್ಕಾರ ನೆರವೇರಿಸಿದ ಶಾಸಕ ಡಾ|| ಧನಂಜಯ ಸರ್ಜಿ ಮಾತನಾಡಿ, ಪ್ರತಿಯೊಬ್ಬರು ಜೀವನದಲ್ಲಿ ಮುಂದೆ ಬರಬೇಕಾದರೆ ಹಾಗೂ ಯಶಸ್ಸನ್ನು ಸಾಧಿಸಬೇಕಾದರೆ ಭಗೀರಥ ಪ್ರಯತ್ನ ಮಾಡಲೇಬೇಕು ಎಂದರು.
ಒಂದು ಸಮಾಜ ಮುಂದೆ ಬರಬೇಕಾದರೆ ಅಥವಾ ಉನ್ನತಿಯನ್ನು ಕಾಣಬೇಕಾದರೆ ಆ ಸಮಾಜದಲ್ಲಿ ವಿದ್ಯಾವಂತರು ಹೆಚ್ಚಾಗಬೇಕು. ಇಂದು ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿದ್ದು ಒಳ್ಳೆಯ ಬೆಳವಣಿಗೆ. ಮುಂದಿನ ದಿನಗಳಲ್ಲಿ ಸಮಾಜದ ಮಕ್ಕಳು ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಲಿ ಎಂದರು.
ಲೋಗೋ ಬಿಡುಗಡೆ ಮಾಡಿದ ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಆರ್ಥಿಕ ಶಕ್ತಿ ನೀಡುವ ಸಂಸ್ಕೃತಿ ಭಾರತೀಯರ ಪ್ರತೀಕ. ಅನಾದಿಕಾಲದಿಂದಲೂ ನಮ್ಮಲ್ಲಿ ಆರ್ಥಿಕ ಸಹಕಾರವನ್ನು ನೀಡುವಂತಹ ಪದ್ದತಿ ಇದೆ. ಅದರ ಮುಂದುವರಿದ ಭಾಗವೇ ಸಹಕಾರ ಸಂಘಗಳು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀಭಗೀರಥ ಸಹಕಾರ ಸಂಘದ ಅಧ್ಯಕ್ಷ ಎನ್.ಮಂಜುನಾಥ್ ಸಂಘಟನೆ ಮಾಡುವುದು ಎಷ್ಟೊಂದು ಕಷ್ಟ ಎಂದು ಅರ್ಥವಾಗುತ್ತಿದೆ. ಸಮಾಜದ ಜನರ ಬಹುದಿನದ ಕನಸಾದ ಈ ಸಂಘ ಇಂದು ನನಸಾಗಿದೆ ಎಂದರು.
ಆರಂಭದಲ್ಲಿ 471 ಸದಸ್ಯರನ್ನ ಹೊಂದಿದ್ದ ಸಂಘ ಪ್ರಸ್ತುತ 700ಕ್ಕೂ ಹೆಚ್ಚು ಸದಸ್ಯರನ್ನ ಹೊಂದಿ 15ಲಕ್ಷ ಮೂಲ ಬಂಡವಾಳವನ್ನ ಸಂಗ್ರಹಿಸಿದೆ. 1250 ರೂಗಳ ಶೇರನ್ನು ಪಡೆಯುವ ಮೂಲಕ ಸಂಘದ ಸದಸ್ಯತ್ವವನ್ನು ಪಡೆದಿದ್ದಾರೆ ಮುಂದಿನ ಎರಡು ವರ್ಷಗಳಲ್ಲಿ 5000ಕ್ಕೂ ಹೆಚ್ಚು ಸದಸ್ಯರನ್ನ ಮಾಡುವ ಗುರಿ ಹೊಂದಲಾಗಿದೆ ಆರಂಭದ ದಿನಗಳಲ್ಲಿ 25 ಸಾವಿರ ವರೆಗೆ ಜಾಮೀನು ಸಾಲ ಹಾಗೂ ವಾಹನ ಸಾಲವನ್ನು ಕೊಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲೆಯಲ್ಲಿ 48 ಹಳ್ಳಿಗಳಿಂದ ಷೇರುದಾರರನ್ನು ಸಹಕಾರ ಸಂಘ ಹೊಂದಿದೆ ಎಂದ ಅವರು, ಅನೇಕ ಕುಟುಂಬಗಳು ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿದ್ದು ಈ ಕುಟುಂಬಗಳಿಗೆ ಆರ್ಥಿಕ ಬಲವನ್ನ ತುಂಬುವ ಸಲುವಾಗಿ ಈ ಸಂಘವನ್ನ ಸ್ಥಾಪಿಸಲಾಗಿದೆ ಎಂದರು.
ಸಮಾರಂಭದಲ್ಲಿ 50ವರ್ಷಗಳ ಕಾಲ ವೈವಾಹಿಕ ಜೀವನ ನಡೆಸಿದ ದಂಪತಿಗಳಿಗೆ ಹಾಗೂ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮಾಂತರ ಶಾಸಕಿ ಶಾರದಾಪೂರ್ಯಾನಾಯ್ಕ್, ನಿವೃತ್ತ ನ್ಯಾಯಾಧೀಶ ಬಿಲ್ಲಪ್ಪ, ಜಗನ್ನಾಥ್ ಸಾಗರ್, ಸಂಘದ ಉಪಾಧ್ಯಕ್ಷ ವಸಂತ್ ಹೋಬಳಿದಾರ್, ನಿರ್ದೇಶಕರುಗಳಾದ ಸುಧಾಕರ್, ರವಿ, ಲೋಕೇಶ್, ಹನುಮಂತಪ್ಪ, ವೆಂಕಟೇಶ್, ರಮೇಶ್ , ಶ್ರೀನಿವಾಸ್, ಶಾಂತಮ್ಮ, ಅರ್ಚನ, ಇತರರು ಉಪಸ್ಥಿತರಿದ್ದರು.

error: Content is protected !!