ಶಿವಮೊಗ್ಗ ಜು.12 ದೇಶದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಾಂಖ್ಯಿಕ ಇಲಾಖೆಯ ದತ್ತಾಂಶ ಆಧರಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ದತ್ತಾಂಶ ಇಲ್ಲದೇ ತೆಗೆದುಕೊಳ್ಳುವ ನಿರ್ಧಾರ ವಿನಾಶಕ್ಕೆ ಕಾರಣವಾಗುತ್ತದೆ ಎಂದು ಉಪನ್ಯಾಸಕ ಡಾ.ಹರಿಪ್ರಸಾದ್ ಹೇಳಿದರು.
ನಗರದ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿಯಲ್ಲಿ ಏರ್ಪಡಿಸಲಾಗಿದ್ದ ಸಾಂಖ್ಯಿಕ ತಜ್ಞರಾದ ಪ್ರೊ.ಸಿ ಮಹಾಲನೋಬಿಸ್
ಜನ್ಮದಿನಾಚರಣೆ ಹಾಗೂ ಸಾಂಖ್ಯಿಕ ದಿನಾಚರಣೆ ಕುರಿತು ಉಪನ್ಯಾಸ ನೀಡಿದ ಅವರು ಒಂದು ದೇಶ ಅಭಿವೃದ್ಧಿ ಹೊಂದಬೇಕಾದರೆ ಆ ದೇಶದ ಜನಸಂಖ್ಯೆ ಹಾಗೂ ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು ಯೋಜನೆ ರೂಪಿಸಿ ಅಭಿವೃದ್ಧಿ ಸಾಧಿಸಲು ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ನೀಡುವ ಅಂಕಿಅಂಶಗಳು ಬಹುಮುಖ್ಯವಾಗಿದೆ.
ಯುದ್ದಗಳ ಸಂದರ್ಭದಲ್ಲಿ ಎದುರಾಳಿ ಸೈನ್ಯದ ಸಂಖ್ಯಾಬಲ ಹಾಗೂ ನಮ್ಮ ಸೈನ್ಯದಲ್ಲಿ ಇರುವ ಶಸ್ತ್ರಾಸ್ತ್ರಗಳ ಕುರಿತು ಸರಿಯಾದ ದತ್ತಾಂಶ ಮಾಹಿತಿ ಇದ್ದರೆ, ಯುದ್ದ ಮಾಡಬೇಕು ಅಥಾವ ಬೇಡ ಎಂದು ನಿರ್ಧಾರ ಮಾಡಲು ಸಾಧ್ಯ. ಆದ್ದರಿಂದ ದತ್ತಾಂಶ ಇಲದೇ ಹೋದರೆ ಒಂದು ದೇಶವೇ ಅವನತಿ ಹೊಂದುತ್ತದೆ. ಇಸ್ರೋ ಏರೋನಾಟಿಕ್ಸ್ ಸರ್ವೆ, ಬೆಳೆ ಸರ್ವೆಗಳನ್ನು ಆಧರಿಸಿ ಸರ್ಕಾರಗಳು ರೈತರ ಬೆಳೆಗಳ ಕುರಿತು ಮಾಹಿತಿ ಪಡೆದು ರೈತರಿಗೆ ಪರಿಹಾರವನ್ನು ನೀಡಲು ಸಹಕಾರಿ ಆಗಿದೆ.
ಪ್ರೊ.ಸಿ ಮಹಾಲನೋಬಿಸ್ ಅವರು ಒಬ್ಬ ಶ್ರೇಷ್ಠ ಸಾಂಖ್ಯಿಕ ತಜ್ಞರಾಗಿದ್ದು ಖ್ಯಾತ ಗಣಿತಶಾಸ್ತ್ರಜ್ಞರಾದ ಸರ್ ಸಿ ವಿ ರಾಮಾನುಜನ್ ಅವರ ಪ್ರಭಾವಕ್ಕೆ ಒಳಗಾಗಿ ಸಂಖ್ಯಾಶಾಸ್ತ್ರದಲ್ಲಿ ದೊಡ್ಡ ಹೆಸರನ್ನು ಮಾಡಿದ್ದರು. ಹಾಗೂ ರವಿಂದ್ರನಾಥ್ ಠಾಗೂರ್ ಅವರ ಒಡನಾಡಿಯಾಗಿ ಬದುಕಿದ ವ್ಯಕ್ತಿಯಾಗಿದ್ದು ಭಾರತದ ಸಾಂಖ್ಯಿಕ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದೆ. ಕಳೆದ 17 ವರ್ಷಗಳಿಂದ ಅವರ ಜನ್ಮ ದಿನವನ್ನು ಸಾಂಖ್ಯಿಕ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಗಾಯಿತ್ರಿ ಅವರು ಮಾತನಾಡಿ ಎಲ್ಲಾ ಇಲಾಖೆಗಳಿಗೂ ದತ್ತಾಂಶದ ಕುರಿತು ಮಾಹಿತಿ ಅಗತ್ಯವಾಗಿದ್ದು ಅಂಕಿ ಅಂಶಗಳು ಇಲ್ಲದೇ ಯಾವುದೇ ಯೋಜನೆಗಳನ್ನು ರೂಪಿಸಲು ಸಾಧ್ಯವಿಲ್ಲ. ಯೋಜನೆ ಇಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ. ಇದೇ ರೀತಿ ಮಾನವನ ಪ್ರತಿದಿನದ ಜೀವನದಲ್ಲಿ ದತ್ತಾಂಶ ಆಧಾರಿತ ಜೀವನವನ್ನು ನಾವು ನಡೆಸುತ್ತಿದ್ದೇವೆ . ಪ್ರತಿಯೊಂದು ಮನೆ, ಹಾಗೂ ಉದ್ಯೋಗ ಸ್ಥಳ,ಹಾಗೂ ವಿವಿಧ ಚಟುವಟಿಕೆಗಳಲ್ಲಿ ದತ್ತಾಂಶ ಅತೀ ಮುಖ್ಯವಾಗಿದೆ. ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ಉತ್ತಮವಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಇನ್ನೂ ಹೆಚ್ಚಿನ ಸೇವೆಯನ್ನು ಸಲ್ಲಿಸೊಣ ಎಂದರು.
ಸೂಡಾ ಆಯುಕ್ತರಾದ ವಿಶ್ವನಾಥ್ ಮಾತನಾಡಿ ಪ್ರೊ.ಸಿ ಮಹಾಲನೋಬಿಸ್ ಅವರ ಜಯಂತಿ ಪ್ರತಿಯೊಬ್ಬರಿಗೂ ತಿಳಿಯುವಂತೆ ಆಗಬೇಕಾಗಿದೆ. ಅದ್ದರಿಂದ ಶಾಲಾ ಕಾಲೇಜುಗಳಲ್ಲಿ ಜಯಂತಿ ಆಚರಿಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಆಗಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಮಹೇಶ್ವರಪ್ಪ, ಎಂಎಡಿಬಿ ಅಧೀನ ಕಾರ್ಯದರ್ಶಿ ಹನುಮಾನಾಯ್ಕ್, ಇಲಾಖೆಯ ನಿವೃತ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

error: Content is protected !!