ಶಿವಮೊಗ್ಗ. ಮೇ 22 : ರಾಜ್ಯದಲ್ಲಿ ತೀವ್ರ ಬರಪರಿಸ್ಥಿತಿ ಹಿನ್ನೆಲೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು, ಉದ್ಯೋಗ ಸೃಜನೆ, ಮೇವಿನ ಕೊರತೆಯಾಗದಂತೆ ಎಲ್ಲಾ ಕ್ರಮಗಳನ್ನು ಆದ್ಯತೆ ಮೇಲೆ ಕೈಗೊಳ್ಳುವುದರ ಜೊತೆಗೆ ಬೆಳೆ ನಷ್ಟ ಸಂತ್ರಸ್ತ ರೈತರ ಪರಿಹಾರ ಹಣವನ್ನು ಕೂಡಲೇ ಪಾವತಿಸುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಜನ ಹಾಗೂ ಜಾನುವಾರುಗಳಿಗೆ ಯಾವುದೇ ಸಂದರ್ಭದಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ನಿಗಾ ವಹಿಸುವುದು. ಹೊಸ ಕೊಳವೆಬಾವಿಗಳನ್ನು ಕೊರೆಯುವ ಬದಲು ಖಾಸಗಿ ಕೊಳವೆಬಾವಿಗಳನ್ನು ಪಡೆಯಲು ಆದ್ಯತೆ ನೀಡುವುದು. ಕುಡಿಯುವ ನೀರಿನ ಬಾಕಿ ಬಿಲ್ಲನ್ನು ಪ್ರತಿ 15 ದಿನಗಳಿಗೊಮ್ಮೆ ಕಡ್ಡಾಯವಾಗಿ ಪಾವತಿಸುವುದು ಹಾಗೂ ಕುಡಿಯುವ ನೀರಿನ ದುರುಪಯೋಗ ತಡೆಗಟ್ಟಲು ನೀರು ಸರಬರಾಜು ಟ್ಯಾಂಕರ್‍ಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸುವಂತೆ ಅವರು ಸೂಚಿಸಿದ್ದಾರೆ.
ಜಿಲ್ಲೆಗಳಲ್ಲಿ ಮೇವು ಬ್ಯಾಂಕ್ ತೆರೆಯಲು ಆದ್ಯತೆ ನೀಡುವುದು, ಸರ್ಕಾರೇತರ ಸಂಸ್ಥೆಗಳು ಗೋಶಾಲೆ ತೆರೆಯಲು ಮುಂದೆ ಬಂದಲ್ಲಿ ಪ್ರೋತ್ಸಾಹಿಸುವುದು, ಹಸಿರು ಮೇವು ಬೆಳೆಸುವ ಸಲುವಾಗಿ ವಿತರಿಸಿದ ಮಿತಿ ಕಿಟ್‍ನ ಸಮರ್ಪಕ ಬಳಕೆ ಬಗ್ಗೆ ಪರಿಶೀಲಿಸುವುದು, ಜನ ಗುಳೆ ಹೋಗುವುದನ್ನು ತಪ್ಪಿಸುವ ಸಲುವಾಗಿ ಸೂಕ್ತ ಉದ್ಯೋಗ ಸೃಜನೆ, ಸಕಾಲಿಕ ವೇತನ ಪಾವತಿ ಸೇರಿದಂತೆ ಎಲ್ಲಾ ಪರಿಹಾರ ಕ್ರಮಗಳನ್ನು ಆದ್ಯತೆ ಮೇಲೆ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹಸಿರು ಮೇವಿನ ಖರೀದಿ ದರ ಪ್ರತಿ ಟನ್‍ಗೆ ಈಗಿರುವ ರೂ. 1,5000/- ರಿಂದ ರೂ. 3,000/-ಕ್ಕೆ ಹೆಚ್ಚಳ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮಕ್ಕೆ ಕುರಿ ಮತ್ತು ಮೇಕೆಗಳಿಗೆ ಜಂತುನಾಶಕ ಮತ್ತು ಲವಣ ಮಿಶ್ರಣ ಔಷಧಿ ಖರೀದಿಗಾಗಿ ರೂ. 5.00 ಕೋಟಿ ಅನುದಾನ, ಅಂತರಾಜ್ಯ ಮೇವು ಸಾಗಾಣಿಕೆಗೆ ಜುಲೈ 31 ರವರೆಗೆ ನಿಬಂಧ, ವಿಜಯಪುರ ಜಿಲ್ಲೆಗೆ ತುರ್ತು ಬರ ಪರಿಹಾರ ಕ್ರಮಗಳಿಗಾಗಿ ಎಸ್‍ಡಿಆರ್‍ಎಫ್, ನಿಧಿಯಿಂದ 10.00 ಕೋಟಿ ಅನುದಾನ ಬಿಡುಗಡೆ. ಬಾಗಲಕೋಟೆ ಜಿಲ್ಲೆಯಲ್ಲಿನ ಬ್ಯಾರೇಜ್ ಗೇಟ್ ನಿರ್ವಹಣೆಗಾಗಿ ಸಣ್ಣ ನೀರಾವರಿ ಇಲಾಖೆಯಿಂದ 15.00 ಲಕ್ಷ ಅನುದಾನ. ಬೆಳೆಹಾನಿ ಹೊಂದಿರುವ ಜಮೀನಿನ ರೈತರು ಮರಣ ಹೊಂದಿದ್ದಲ್ಲಿ, ಫಲಾನುಭವಿ ರೈತರ ಸಕ್ಷಮ ವಾರಸುದಾರರಿಗೆ ಹಾಗೂ ಜಮೀನು ಜಂಟಿ ಖಾತೆಯಿದ್ದಲ್ಲಿ, ತನಿಖೆ ನಡೆಸಿ ಅರ್ಹ ಫಲಾನುಭವಿ ರೈತರಿಗೆ ಇನ್‍ಪುಟ್ ಸಬ್ಸಿಡಿ ವಿತರಿಸುವ ಬಗ್ಗೆ ಸೂಕ್ತ ನಿರ್ಣಯ ತೆಗೆದುಕೊಳ್ಳಲು ಸಂಬಂಧಪಟ್ಟ ತಹಶೀಲ್ದಾರರಿಗೆ ಅಧಿಕಾರ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಲ್ಲದೇ 2018ರ ಮುಂಗಾರು ಹಂಗಾಮಿನಲ್ಲಿ ಬಿದ್ದ ಭಾರಿ ಮಳೆಯಿಂದಾಗಿ ಕೊಡಗು ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಅಪಾರ ಹಾನಿಯಾಗಿರುವುದನ್ನು ಮನಗಂಡು ಈ ಬಾರಿ ಮುಂಗಾರು ಆರಂಭಕ್ಕೆ ಮುನ್ನವೇ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 2 ಸುಸಜ್ಜಿತ ರಾಷ್ಟ್ರೀಯ ವಿಪತ್ತು ಸ್ಪಂದನ ಪಡೆಗಳನ್ನು ಮೇ 25 ರಿಂದಲೇ ನಿಯೋಜಿಸಲಾಗುವುದು ಎಂದು ಅವರು ತಿಳಿಸಿದರು.
ಹಾಗೂ ಕೃಷಿ ಇಲಾಖೆಯು ಬಿತ್ತನೆ ಬೀಜ, ಗೊಬ್ಬರಗಳನ್ನು ಸಾಕಷ್ಟು ದಾಸ್ತಾನು ಇಟ್ಟುಕೊಂಡು ಮುಂಬರುವ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಸರಬರಾಜು ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್. ದೇಶಪಾಂಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!