ಶಿವಮೊಗ್ಗ, ಏಪ್ರಿಲ್ 04 : ಏಪ್ರಿಲ್ 23ರಂದು ನಡೆಯಲಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಏಪ್ರಿಲ್ 04ರಂದು ಇಬ್ಬರು ಅಭ್ಯರ್ಥಿಗಳು ಸೇರಿದಂತೆ ಒಟ್ಟು ಮೂರು ನಾಮಪತ್ರ ಸಲ್ಲಿಸಿದ್ದಾರೆ.
ಮಾರ್ಚ್ 28ರಿಂದ ಇಂದಿನವರೆಗೆ ಒಟ್ಟು 14ಉಮೇದುವಾರರು ಒಟ್ಟು 26ನಾಮಪತ್ರಗಳನ್ನು ಸಲ್ಲಿಸಿದಂತಾಗಿದೆ. ಇವರಲ್ಲಿ ರಿಪಬ್ಲಿಕನ್ ಸೇನಾ ಪಕ್ಷದ ಅಭ್ಯರ್ಥಿ ಎನ್.ಟಿ.ವಿಜಯ್‍ಕುಮಾರ್ ಮತ್ತು ಜನತಾದಳದ ಅಭ್ಯರ್ಥಿ ಎಸ್. ಮಧು ಬಂಗಾರಪ್ಪ ಅವರು ತಲಾ ನಾಲ್ಕು ನಾಮಪತ್ರಗಳನ್ನು, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಮೂರು ನಾಮಪತ್ರಗಳನ್ನು, ಪಕ್ಷೇತರ ಅಭ್ಯರ್ಥಿಗಳಾದ ಶೇಖರ್‍ನಾಯ್ಕ್ ಬಿನ್ ರಾಮಚಂದ್ರನಾಯ್ಕ್, ಎಸ್.ಉಮೇಶಪ್ಪ, ಶಶಿಕುಮಾರ್ ಬಿ.ಕೆ. ಮತ್ತು ಉಮೇಶ ವರ್ಮಾ ಇವರು ತಲಾ ಎರಡು ನಾಮಪತ್ರಗಳನ್ನು ಹಾಗೂ ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಅಭ್ಯರ್ಥಿ ಕೆ.ಕೃಷ್ಣ, ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಗುಡ್ಡಪ್ಪ ಬಿನ್ ಕರಿಯಪ್ಪ, ಪಕ್ಷೇತರ ಅಭ್ಯರ್ಥಿ ಮಹ್ಮದ್ ಇಸೂಫ್ ಖಾನ್, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ವೆಂಕಟೇಶ್ ಆರ್. ಮತ್ತು ವೈ.ಡಿ.ಸತೀಶ್, ಪಕ್ಷೇತರ ಅಭ್ಯರ್ಥಿಗಳಾದ ವಿನಯ್ ಕೆ.ಸಿ. ಮತ್ತು ಕೆ.ಶಿವಲಿಂಗಪ್ಪ ಅವರು ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ.
ಇದರಿಂದಾಗಿ ಈವರೆಗೆ 14ಉಮೇದುವಾರರು ಒಟ್ಟು 26ನಾಮಪತ್ರಗಳನ್ನು ಸಲ್ಲಿಸಿದಂತಾಗಿದೆ. ಈ ನಾಮಪತ್ರಗಳ ಪರಿಶೀಲನೆಯು ಏಪ್ರಿಲ್ 05ರಂದು ನಡೆಯಲಿದೆ. ನಾಮಪತ್ರ ಸಲ್ಲಿಸಿ ಅರ್ಹರಾದ ಉಮೇದುವಾರರು ತಮ್ಮ ನಾಮಪತ್ರಗಳನ್ನು ಹಿಂದೆಗೆದುಕೊಳ್ಳಲು ಏಪ್ರಿಲ್ 08 ಕೊನೆಯ ದಿನವಾಗಿದೆ. ಅಂದು ಮಧ್ಯಾಹ್ನ 3ಗಂಟೆಯ ನಂತರ ಅಂತಿಮವಾಗಿ ಕಣದಲ್ಲಿ ಉಳಿದ ಅಭ್ಯರ್ಥಿಗಳ ಪಟ್ಟಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳು ಘೋಷಿಸುವರು.
ವೀಕ್ಷಕರ ನೇಮಕ :
ಜಿಲ್ಲೆಯಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಭಾರತ ಚುನಾವಣಾ ಆಯೋಗವು ಸಾಮಾನ್ಯ ವೀಕ್ಷಕರು, ಲೆಖ್ಖ-ಪತ್ರ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರನ್ನು ನೇಮಿಸಿದೆ.
ಸಾಮಾನ್ಯ ವೀಕ್ಷಕರಾಗಿ ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ಶಿವಮೊಗ್ಗ ಮತ್ತು ಶಿಕಾರಿಪುರ ವಿಧಾನಸಭಾ ಕ್ಷೇತ್ರಗಳಿಗೆ ಶಾಹಿದ್ ಮಂಜರ್ ಅಬ್ಬಾಸ್ ರಿಜ್ವಿ,(ಮೊ.9415047611), ತೀರ್ಥಹಳ್ಳಿ ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರಗಳಿಗೆ ಪುಷ್ಪೇಂದ್ರ ಸಿಂಗ್(ಮೊ.9582351955) ಹಾಗೂ ಸೊರಬ ಮತ್ತು ಸಾಗರ ವಿಧಾನಸಭಾ ಕ್ಷೇತ್ರಗಳಿಗೆ ರಾಜೀವ್‍ಕುಮಾರ್(ಮೊ.8334877100) ಅವರನ್ನು ನೇಮಿಸಲಾಗಿದೆ.
ಲೆಖ್ಖ-ಪತ್ರ ವೀಕ್ಷಕರಾಗಿ ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ಶಿವಮೊಗ್ಗ ಮತ್ತು ಶಿಕಾರಿಪುರ ವಿಧಾನಸಭಾ ಕ್ಷೇತ್ರಗಳಿಗೆ ಕೆ.ಎಲ್.ಸೋಲಂಕಿ(9408793558) ಮತ್ತು ತೀರ್ಥಹಳ್ಳಿ, ಬೈಂದೂರು, ಸೊರಬ ಮತ್ತು ಸಾಗರ ವಿಧಾನಸಭಾ ಕ್ಷೇತ್ರಗಳಿಗೆ ಸೋಫಿಯಾ ದಹಿಯಾ(ಮೊ.9871074775) ಅವರನ್ನು ನೇಮಿಸಲಾಗಿದೆ.
ಪೊಲೀಸ್ ವೀಕ್ಷಕರಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ರಾಮ್‍ಸಿಂಗ್(8130100080) ಅವರನ್ನು ನೇಮಿಸಲಾಗಿದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿರುವ ಎಲ್ಲಾ ವೀಕ್ಷಕರಿಗೆ ಸಹಾಯಕರಾಗಿ ಅಗತ್ಯವಿರುವ ಸಿಬ್ಬಂಧಿಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

error: Content is protected !!