ಶಿವಮೊಗ್ಗ, ನವೆಂಬರ್ 11 : ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಶಿವಮೊಗ್ಗದ ಬಳ್ಳೆಕೆರೆ ಸಂತೋಷ್ ಅವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ 3ವರ್ಷಗಳ ಅವಧಿಗೆ ನೇಮಕಗೊಳಿಸಿ ಸರ್ಕಾರವು ಆದೇಶ ಹೊರಡಿಸಿದೆ.
ವಿಶ್ವವಿದ್ಯಾಲಯದ ಶೈಕ್ಷಣಿಕ ಚಟುವಟಿಕೆಗಳು, ಮೂಲಸೌಲಭ್ಯ ಸೇರಿದಂತೆ ವಿದ್ಯಾಲಯದ ಸರ್ವಾಂಗೀಣ ವಿಕಾಸಕ್ಕೆ ಪೂರಕವಾಗಿ ಸಲಹೆ-ಸೂಚನೆ ನೀಡುವಲ್ಲಿ ಇವರ ಸೇವೆಯು ಅಮೂಲ್ಯವಾಗಿದೆ.
ಬಳ್ಳೆಕೆರೆ ಸಂತೋಷ್ ಅವರು ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮಾಡಿರುವ ಸೇವೆಯನ್ನು ಪರಿಗಣಿಸಿ ಅವರನ್ನು ನಿಯೋಜಿಸಲಾಗಿದೆ.
ಪ್ರಸ್ತುತ ಬಳ್ಳೆಕೆರೆ ಸಂತೋಷ್ ಅವರು ನರೇಂದ್ರಮೋದಿ ವಿಚಾರಮಂಚ್‍ನ ರಾಜ್ಯ ಅಧ್ಯಕ್ಷರಾಗಿ, ಭಾರತೀಯ ಮಾನವ ಹಕ್ಕುಗಳ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ಬಿ.ಜೆ.ಪಿ. ನಗರ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ನಗರದ ಹಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಜವಾಬ್ದಾರಿಯುತ ಸ್ಥಾನಮಾನವನ್ನು ಹೊಂದಿದವರಾಗಿದ್ದಾರೆ.
ಬಳ್ಳೆಕೆರೆ ಸಂತೋಷ್ ಅವರು ಹಿರಿಯ ಸಾಹಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾಗಿದ್ದ ದಿ||ಬಳ್ಳೆಕರೆ ಹನುಮಂತಪ್ಪ ಅವರ ಸುಪುತ್ರರಾಗಿದ್ದಾರೆ.

error: Content is protected !!