ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಸುಧಾರಿಸುತ್ತಿದ್ದು, ಸಂಪರ್ಕ ವ್ಯವಸ್ಥೆ ಕಲ್ಪಿಸುವುದು, ಜನವಸತಿ ಪ್ರದೇಶಗಳಲ್ಲಿ ನಿಂತಿರುವ ನೀರನ್ನು ಖಾಲಿ ಮಾಡುವುದು, ನೆರೆ ತ್ಯಾಜ್ಯಗಳನ್ನು ವಿಲೇವಾರಿ ಮಾಡಿ ಸ್ವಚ್ಛತೆಯನ್ನು ಯುದ್ದೋಪಾಧಿಯಲ್ಲಿ ಕೈಗೊಳ್ಳುವುದು ಸೇರಿದಂತೆ ನೆರೆ ಪರಿಹಾರ ಕಾರ್ಯಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಭಾನುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳ ಸಭೆ ನಡೆಸಿದ ಅವರು, ಮಳೆ ನೀರು ಕಡಿಮೆಯಾಗುತ್ತಿದ್ದು, ಎಲ್ಲಾ ಇಲಾಖೆಗಳು ಸಮನ್ವಯದಿಂದ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಶಾಲೆಗಳ ಸುರಕ್ಷತೆ ಖಾತ್ರಿಪಡಿಸಿ: ಅತಿವೃಷ್ಟಿಯಿಂದಾಗಿ ಹಾನಿಗೀಡಾಗಿರುವ ಶಾಲೆಗಳ ಸುರಕ್ಷತೆಯನ್ನು ಖಾತ್ರಿಪಡಿಸಬೇಕು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರತಿಯೊಂದು ಶಾಲೆಗೆ ಭೇಟಿ ನೀಡಿ ಸುರಕ್ಷತೆಯನ್ನು ನಾಳೆ ಸಂಜೆ ಒಳಗಾಗಿ ದೃಢೀಕರಿಸಬೇಕು. ಗೋಡೆ ಕುಸಿದು ಅಪಾಯ ಸಂಭವಿಸಿದರೆ ಸಂಬಂಧಪಟ್ಟ ಅಧಿಕಾರಿಯನ್ನು ಹೊಣೆಗಾರ ಮಾಡಲಾಗುವುದು. ಅತಿವೃಷ್ಟಿಯಿಂದ ಶಾಲಾ ಮಕ್ಕಳ ಪುಸ್ತಕ, ಸಮವಸ್ತ್ರ ಇತ್ಯಾದಿ ಹಾನಿಯಾಗಿರುವ ಪ್ರಮಾಣವನ್ನು ಪರಿಶೀಲಿಸಿ ಹೊಸದಾಗಿ ಪೂರೈಕೆಗೆ ತಕ್ಷಣ ಬೇಡಿಕೆ ಸಲ್ಲಿಸಬೇಕು ಎಂದು ಹೇಳಿದರು.

ಆರೋಗ್ಯ ಇಲಾಖೆಗೆ ಸೂಚನೆ: ನೆರೆ ಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಯುದ್ದೋಪಾಧಿಯಲ್ಲಿ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು. ಕುಡಿಯುವ ನೀರಿನ ಬಗ್ಗೆ ಅತೀವ ಜಾಗೃತೆ ವಹಿಸಬೇಕಾಗಿದ್ದು, ಕುದಿಸಿ ಆರಿಸಿದ ನೀರನ್ನು ಮಾತ್ರ ಕುಡಿಯಬೇಕು. ಅಗತ್ಯ ಔಷಧಿಗಳನ್ನು ಬೇಕಾದಷ್ಟು ಪ್ರಮಾಣದಲ್ಲಿ ದಾಸ್ತಾನು ಇರಿಸಬೇಕು. ಆರೋಗ್ಯ ಇಲಾಖೆ ಕಾರ್ಯಕರ್ತರು ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿ ವರದಿಯನ್ನು ಸಲ್ಲಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಪಿಡಿಒ ಜತೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ನಗರ ಸ್ಥಳೀಯ ಸಂಸ್ಥೆಗಳು ನೆರೆ ನೀರು ನಿಂತಿರುವ ಕಡೆಗಳಲ್ಲಿ ಅದನ್ನು ಪಂಪ್ ಮಾಡುವ ಮೂಲಕ ಖಾಲಿ ಮಾಡಬೇಕು. ನೆರೆ ನೀರಿನಲ್ಲಿ ಹರಿದು ಬಂದಿರುವ ತ್ಯಾಜ್ಯಗಳನ್ನು ಆದಷ್ಟು ಬೇಗನೆ ತೆರವು ಮಾಡಿ ವಿಲೇವಾರಿ ಮಾಡಬೇಕು. ನಿಂತ ನೀರಿನಲ್ಲಿ ಸೊಳ್ಳೆ ಹುಟ್ಟಿ ಸಾಂಕ್ರಾಮಿಕ ರೋಗಗಳು ಹರಡದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಕ್ಷೇತ್ರಗಳಿಗೆ ಭೇಟಿ ನೀಡಿ: ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಇತ್ಯಾದಿ ಇಲಾಖೆಗಳ ಅಧಿಕಾರಿಗಳು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಹಾನಿಯನ್ನು ಅಂದಾಜಿಸಬೇಕು. ಗ್ರಾಮಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜಾನುವಾರುಗಳಿಗೆ ಮೇವು ಪೂರೈಕೆ ಇರುವುದನ್ನು ಖಾತ್ರಿಪಡಿಸಬೇಕು. ವಿದ್ಯಾರ್ಥಿಗಳ ಹಾಸ್ಟೆಲ್‍ಗಳ ಪರಿಸ್ಥಿತಿಯನ್ನು ಪರಿಶೀಲಿಸಬೇಕು ಎಂದರು.

ಪರಿಹಾರ ಕೇಂದ್ರ: ಪ್ರಸ್ತುತ ಶಿವಮೊಗ್ಗ ನಗರದಲ್ಲಿ 10 ಹಾಗೂ ಜಿಲ್ಲೆಯ ಇತರ ಭಾಗಗಳಲ್ಲಿ 15 ಪ್ರವಾಹ ಪರಿಹಾರ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ಒಟ್ಟು 3578ಮಂದಿಗೆ ಸೌಲಭ್ಯ ಒದಗಿಸಲಾಗುತ್ತಿದೆ. ಇಲ್ಲಿ ಉತ್ತಮ ಗುಣಮಟ್ಟದ ಕುಡಿಯುವ ನೀರು, ಆಹಾರ ಒದಗಿಸಲಾಗುತ್ತಿದೆ. ಹೊರಗಿನ ವ್ಯಕ್ತಿಗಳು ಈ ಪರಿಹಾರ ಕೇಂದ್ರಗಳಲ್ಲಿ ಸಿದ್ಧಪಡಿಸಿದ ಆಹಾರ ವಿತರಿಸಲು ಅನುಮತಿ ನೀಡಲಾಗುವುದಿಲ್ಲ. ಪರಿಹಾರ ಕೇಂದ್ರಗಳಲ್ಲಿಯೇ ಸಿದ್ಧಪಡಿಸಿದ ಆಹಾರವನ್ನು ಆರೋಗ್ಯ ಅಧಿಕಾರಿಗಳಿಂದ ಖಾತ್ರಿಪಡಿಸಿದ ಬಳಿಕ ವಿತರಣೆ ಮಾಡಬೇಕು. ಪರಿಹಾರ ಕೇಂದ್ರಗಳು ವೈದ್ಯರು ಪಾಳಿ ಪ್ರಕಾರ ಕೆಲಸ ನಿರ್ವಹಿಸಬೇಕು. ಮನೆಗಳಿಗೆ ನೀರು ನುಗ್ಗಿ ಗೋಡೆಗಳು ಒದ್ದೆಯಾಗಿರುವ ಹಿನ್ನೆಲೆಯಲ್ಲಿ ಒಂದೆರಡು ದಿನಗಳ ಕಾಲ ಪರಿಹಾರ ಕೇಂದ್ರದಲ್ಲಿಯೇ ಇರಲು ಮನವೊಲಿಸುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದರು.

ಹಾನಿ ಅಂದಾಜು: ಅತಿವೃಷ್ಟಿಯಿಂದ 3 ಪ್ರಾಣ ಹಾನಿ ದೃಢೀಕರಿಸಲಾಗಿದ್ದು, ಒಟ್ಟು 10ಲಕ್ಷ ರೂ. ಪರಿಹಾರ ಒದಗಿಸಲಾಗಿದೆ. 805 ಮನೆಗಳು ಭಾಗಶಃ ಹಾಗೂ ಪೂರ್ಣವಾಗಿ ಹಾನಿಗೀಡಾಗಿವೆ. ಒಟ್ಟು 43 ಜಾನುವಾರುಗಳು ಸಾವಿಗೀಡಾಗಿದ್ದು, 8300 ಕೋಳಿಗಳು ಸತ್ತಿವೆ. 437 ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದ್ದು 342 ಹಳ್ಳಿಗಳಲ್ಲಿ ಪುನರ್ ಸಂಪರ್ಕ ಕಲ್ಪಿಸಲಾಗಿದೆ. 976 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು ಇದುವರೆಗೆ 465 ಕಂಬಗಳನ್ನು ಹೊಸದಾಗಿ ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಅತಿವಷ್ಟಿಯಿಂದ 14,233 ಹೆಕ್ಟೇರ್ ಕೃಷಿ ಭೂಮಿ ಜಲಾವೃತವಾಗಿದ್ದು, 5300 ಹೆಕ್ಟೇರ್ ಮುಸುಕಿನ ಜೋಳವಿದೆ. 8ಸಾವಿರ ಹೆ. ಭತ್ತ ಹಾನಿಗೀಡಾಗುವ ಸಾಧ್ಯತೆಯಿದೆ. ನೆರೆ ನೀರು ಇಳಿದ ಬಳಿಕ ಹಾನಿಯನ್ನು ನಿಖರವಾಗಿ ಅಂದಾಜಿಸಬಹುದಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣ್‍ಕುಮಾರ್ ತಿಳಿಸಿದರು. 3717 ಹೆ. ತೋಟಗಾರಿಕಾ ಪ್ರದೇಶ ಜಲಾವೃತವಾಗಿದ್ದು, 4804 ರೈತರು ಬಾಧಿತರಾಗಿದ್ದಾರೆ ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಯೋಗೀಶ್ ಹೇಳಿದರು.

ಅಂದಾಜು ಪಟ್ಟಿ ಸಲ್ಲಿಸಿ: ರಸ್ತೆ, ಸೇತುವೆ, ಕಟ್ಟಡಗಳು, ಕೆರೆ, ಕಾಲುವೆಗಳು, ಸಾರ್ವಜನಿಕ ಸ್ವತ್ತುಗಳಿಗೆ ಉಂಟಾಗಿರುವ ಹಾನಿಯನ್ನು ಕಡ್ಡಾಯವಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅಂದಾಜು ಪಟ್ಟಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.

ಅಧಿಕಾರಿಗಳಿಗೆ ಸೂಚನೆ: ಯಾವುದೇ ಅಧಿಕಾರಿಗಳು ಪೂರ್ವಾನುಮತಿ ಇಲ್ಲದೆ ಕೇಂದ್ರಸ್ಥಾನ ಬಿಟ್ಟು ಹೋಗಬಾರದು. ಮೊಬೈಲ್ ಸದಾ ಆನ್ ಇಟ್ಟು ದಿನದ 24ತಾಸು ಸಂಪರ್ಕಕ್ಕೆ ಸಿಗಬೇಕು ಎಂದು ಸೂಚನೆ ನೀಡಿದರು.

ಪೊಲೀಸ್ ವರಿಷ್ಟಾಧಿಕಾರಿ ಶಾಂತರಾಜು, ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್, ಅಪರ ಜಿಲ್ಲಾಧಿಕಾರಿ ಅನುರಾಧ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!