ಶಿವಮೊಗ್ಗ, ಜುಲೈ.09 : ಅಡಿಕೆ ಬೆಳೆಗೆ ಕಂಟಕವಾಗಿರುವ ಬೇರು ಹುಳುಗಳ ಸಮಸ್ಯೆ ನಿಯಂತ್ರಣಕ್ಕೆ ಜಿಲ್ಲಾ ತೋಟಗಾರಿಕೆ ಇಲಾಖೆಯು ಅಡಿಕೆ ಬೆಳೆಗಾರರಿಗೆ ಮುಂಜಾಗೃತ ಕಾರ್ಯವನ್ನು ಕೈಗೊಳ್ಳುವಂತೆ ಸೂಚಿಸಿದೆ.
ಮುಖ್ಯವಾಗಿ ತೋಟಗಳಲ್ಲಿ ನೀರು ನಿಲ್ಲುವುದು ಹಾಗೂ ಸ್ವಚ್ಚವಾಗಿಟ್ಟುಕೊಳ್ಳದಿರುವುದು ಮತ್ತು ಅಗತ್ಯ ಪ್ರಮಾಣದ ಬೇವಿನ ಹಿಂಡಿ ಅಥವಾ ಬೇವಿನ ಎಣ್ಣೆಯನ್ನು ಬೇರುಗಳಿಗೆ ಒದಗಿಸದಿರುವುದು ಬೇರುಹುಳುಗಳ ಉತ್ಪತ್ತಿ ಹಾಗೂ ಹೆಚ್ಚಳಕ್ಕೆ ಕಾರಣಗಳಾಗಿವೆ.
ಬೆರು ಹುಳಗಳು ಮರದ ಮೂಲವಾದ ಬೇರುಗಳನ್ನು ತಿಂದು ಹಾಕುವ ಮೂಲಕ ಮರದ ಸ್ವಾಸ್ಥ್ಯವನ್ನು ಹಾಳುಗೆಡುವುತ್ತವೆ. ಇದರಿಂದಾಗಿ ಮರಗಳು ಸೊರಗಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕೊನೆಯ ಹಂತದಲ್ಲಿ ಮರದ ತಲೆಭಾಗ ಸಂಪೂರ್ಣ ಸಪುರಗೊಂಡು ಮುರಿದು ಬಿಳುತ್ತವೆ. ಈ ಕುರಿತು ರೈತರು ಮುಂಜಾಗರುಕತೆ ವಹಿಸಿದಲ್ಲಿ ಬೇರು ಹುಳುಗಳ ಸಮಸ್ಯೆಯನ್ನು ನಿಯಂತ್ರಣದಲ್ಲಿಡಬಹುದಾಗಿದೆ.
ನಿಯಂತ್ರಣಕ್ರಮಗಳು;
ತೋಟದಲ್ಲಿ ಬಸಿಕಾಲುವೆಗಳನ್ನು ನಿರ್ಮಸುವುದರ ಮೂಲಕ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಕಳೆ ಬೆಳೆಯದಂತೆ ಕ್ರಮಕೈಗೊಳ್ಳುವುದು. ಕಸ-ಕಡ್ಡಿಗಳನ್ನು ತೆಗೆದು ಸ್ವಚ್ಚವಾಗಿ ಇಟ್ಟುಕೊಳ್ಳುವ ಮೂಲಕ ಬೇರು ಹುಳುಗಳು ಉತ್ಪತ್ತಿಯಾಗದಂತೆ ತಡೆಯಬಹುದಾಗಿದೆ.
ಅಡಿಕೆ ಸಸಿ ಅಥವಾ ಮರಗಳ ಸುತ್ತ ಹುಟ್ಟುವ ಹುಲ್ಲುಗಳನ್ನು ಮಳೆಗಾಲದ ಆರಂಭಕ್ಕೂ ಮುನ್ನವೇ ತೆಗೆದು ನಾಶಪಡಿಸುವುದು. ಜುಲೈ ಹಾಗೂ ಆಗಷ್ಟ್ ತಿಂಗಳ ಅವಧಿಯಲ್ಲಿ ಸಂಜೆ 6 ರಿಂದ 7.30ರ ನಡುವೆ ಹಾರಾಡುವ ದುಂಬಿಗಳ ನಿಯಂತ್ರಣಕ್ಕೆ ಟ್ರಾಪ್‍ಗಳ ಬಳಕೆ ಹಾಗೂ ಅಗತ್ಯ ಕ್ರಮ ಕೈಗೊಳ್ಳುವುದು.
ಪ್ರತಿ ಮರಗಳ ಬುಡಕ್ಕೂ ವರ್ಷಕ್ಕೊಮ್ಮೆ 250 ಗ್ರಾಂ ಬೇವಿನ ಹಿಂಡಿಯನ್ನು ನೀಡುವುದು ಹಾಗೂ ಅಗತ್ಯವಿದ್ದರೆ ನೀರಿನೊಂದಿಗೆ ಬೇವಿನೆಣ್ಣೆ ಮಿಶ್ರಣ ಮಾಡಿ ಬುಡಗಳಿಗೆ ಸಿಂಪಡಿಸುವುದು.
ಪ್ರತಿ ಲೀಟರ್ ನೀರಿಗೆ 2ಮಿ.ಲೀ ಕ್ಲೋರೋಫೈರಿಫಾಸ್ (20ಇ.ಸಿ) ಅಥವಾ 0.5 ಮಿ.ಲೀ ಇಮಿಡಾಕ್ಲೋಪ್ರಿಡ್, ಬೆರೆಸಿ ಪ್ರತಿ ಮರಗಳ ಬುಡಕ್ಕೂ 2-3 ಲೀಟರ್ ದ್ರಾವಣ ಹಾಕವುದು. ಇಲ್ಲವೇ 20 ಗ್ರಾಂ ಫೋರೆಟ್ ಅಥವಾ ಕಾರ್ಬೋಫ್ಯೂರನ್ ಹಾಕುವುದರಿಂದ ಬೇರುಹುಳುಗಳ ಸಮಸ್ಯೆಯನ್ನು ನಿಯಂತ್ರಿಸಬಹುದಾಗಿದೆ.

error: Content is protected !!