ಶಿವಮೊಗ್ಗ, ಜುಲೈ.3 : ಯಾವುದೇ ಅಭಿವೃದ್ದಿ ಯೋಜನೆಗಳನ್ನು ರೂಪಿಸುವಲ್ಲಿ ನಿಖರವಾದ ಅಂಕಿ ಅಂಶಗಳು ಪ್ರಮುಖ ಪಾತ್ರವಹಿಸುತ್ತವೆ. ಅವುಗಳ ಆಧಾರದ ಮೇಲೆಯೇ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಅನುರಾಧ.ಜಿ ಹೇಳಿದರು.
ಜಿಲ್ಲಾ ಸಂಗ್ರಹಣಾಧಿಕಾರಿಗಳ ಕಛೇರಿಯಲ್ಲಿ ಆಯೋಜಿಸಲಾಗಿದ್ದ ಸಾಂಖ್ಯಿಕ ಪಿತಾಮಹ ಪ್ರೊ. ಪಿ.ಸಿ ಮಹಾಲನೋಬಿಸ್‍ರ 126ನೇ ಜನ್ಮ ದಿನ ಹಾಗೂ 13ನೇ ಸಾಂಖ್ಯಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ನಾವು ಮುಂದುವರೆದು ಮೊಬೈಲ್ ಆಪ್‍ಗಳ ಮೂಲಕ ಬಹಳ ಬೇಗ ದತ್ತಾಂಶಗಳನ್ನು ಸಂಗ್ರಹಿಸಬಹುದಾಗಿದೆ ಮತ್ತು ಈ ಮಾಹಿತಿ ಬಹಳ ಬೇಗ ಸಾರ್ವಜನಕರನ್ನು ಸಹ ತಲುಪುತ್ತದೆ. ಇದರಿಂದಾಗಿ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಸಾಧ್ಯ. ಆದರೆ ತಾಂತ್ರಿಕತೆಯ ವೇಗಕ್ಕೆ ಎಲ್ಲರೂ ಹೊಂದಿಕೊಂಡು ತ್ವರಿತವಾಗಿ ಸೇವೆಯನ್ನು ಒದಗಿಸಲು ಪ್ರಯತ್ನಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಾಂಖ್ಯಿಕ ಇಲಾಖೆ ನಿವೃತ್ತ ಅಪರ ನಿರ್ದೇಶಕ ಸುಬ್ಬರಾವ್ ಮಾತನಾಡಿ ಒಂದು ಯಶಸ್ವಿ ಯೋಜನೆ ರೂಪುಗೊಳ್ಳ ಬೇಕಾದರೆ ಸರಿಯಾದ ಅಂಕಿ ಅಂಶಗಳ ಮಾಹಿತಿ ಬಹಳ ಮುಖ್ಯ. ಅದ್ದರಿಂದ ಅಧಿಕಾರಿಗಳು ಅಂಕಿ ಅಂಶಗಳ ಮಾಹಿತಿಯನ್ನು ಅದರ ಮೂಲ ಉದ್ದೇಶವನ್ನು ಅರಿತು ಕರಾರುವಕ್ಕಾಗಿ ಸಂಗ್ರಹಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಬ್ರಿಜೆಟ್ ವರ್ಗಿಸ್ ಅವರು ಮಾತನಾಡಿ, ಸಂಖ್ಯಾಶಾಸ್ತ್ರಕ್ಕೆ ಸಾಂಖ್ಯಿಕ ಪಿತಾಮಹ ಪ್ರೊ. ಪ್ರಶಾಂತಚಂದ್ರ ಮಹಾಲನೋಬಿಸ್ ಅವರು ಸಂಖ್ಯಾ ಶಾಸ್ತ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ ದಿನವನ್ನು ಆಚರಿಸಲಾಗುತ್ತಿದೆ. ಅವರು ವಿವಿಧ ಬೆಳೆಗಳ ಇಳುವರಿಗೆ ಹಾಕಿಕೊಟ್ಟ ಮಾದರಿ ಸಮೀಕ್ಷೆ ಕ್ರಮದಲ್ಲಿಯೇ ಬೆಳೆ ಕಟಾವು ಯೋಜನೆ ನಿರ್ವಹಿಸಿ ದೇಶದ ಉತ್ಪಾದನೆಯನ್ನು ಅಂದಾಜಿಸಲಾಗುತ್ತಿದೆ. ಇದನ್ನೇ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಅನುಸರಿಸಲಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಸಂಸ್ಥೆಯ ಡಿವಿಜನಲ್ ಮ್ಯಾನೇಜರ್ ಸುಧಾಮಣಿ, ಸಹಾಯಕ ಸಾಂಖ್ಯಿಕ ಅಧಿಕಾರಿ ಸುರೇಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸುಬ್ಬರಾವ್, ಸರ್ವೋತ್ತಮ ಪ್ರಶಸ್ತಿ ಪಡೆದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಬ್ರಿಜೆಟ್ ವರ್ಗೀಸ್, ನೌಕರರ ಸಂಘಕ್ಕೆ ಆಯ್ಕೆಯಾದ ವೆಂಕಟೇಶ್ ಇವರನ್ನು ಸನ್ಮಾನಿಸಲಾಯಿತು. ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಹನುಮಾನಾಯ್ಕ ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್‍ನ ಮುಖ್ಯ ಯೋಜನಾಧಿಕಾರಿ ಉಮಾ ಡಿ ಸದಾಶಿವ, ಜಿಲ್ಲಾಧಿಕಾರಿ ಕಚೇರಿ ಸಹಾಯಕಿ ನಫೀಸಾ ಮತ್ತಿತರರು ಉಪಸ್ಥಿತರಿದ್ದರು.

error: Content is protected !!