ಪಶುಸಂಗೋಪನೆಯು ಕೃಷಿಯ ಅವಿಭಾಜ್ಯ ಅಂಗವಾಗಿದ್ದು, ಅದರಲ್ಲೂ ಇತ್ತೀಚೆಗೆ ಉದ್ಯಮವಾಗಿ ಹೆಚ್ಚು ಪ್ರಚಲಿತದಲ್ಲಿರುವ ಕೋಳಿ ಸಾಕಾಣಿಕೆಯಿಂದ ರೈತರು ಹೆಚ್ಚು ಆದಾಯ ಗಳಿಸುವುದರಲ್ಲಿ ಸಂಶಯವಿಲ್ಲ ಮತ್ತು ಈ ಉದ್ದಿಮೆಯು ನಿರುದ್ಯೋಗಿ ಯುವಕ ಯುವತಿಯರಿಗೆ ಆಶಾಕಿರಣವಾಗಬಲ್ಲದು ಎಂದು ಶ್ರೀ.ಅಂಥೋನಿ ಎಸ್. ಮರಿಯಪ್ಪ, IಈS, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಶಿವಮೊಗ್ಗ ವಿಭಾಗ ಇವರು ಅಭಿಪ್ರಾಯ ಪಟ್ಟರು. ಇವರು 24-06-2019 ಮತ್ತು 25-06-2019 ರಂದು ಪಶುವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗದ ಜಾನುವಾರು ಸಾಕಾಣಿಕ ಸಂಕೀರ್ಣ ವಿಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ “ವೈಜ್ಞಾನಿಕ ಕೋಳಿ ಸಾಕಾಣಿಕೆ” ಕುರಿತ ಸಮಾಜ ಕಲ್ಯಾಣ ಇಲಾಖೆಯ ಪ್ರಾಯೋಜಿತ ಎರಡು ದಿನಗಳÀ ಉಚಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಂತರ ವಿಭಾಗದ ವತಿಯಿಂದ ಹೊರತರಲಾದ ‘ವೈಜ್ಞಾನಿಕ ಕೋಳಿ ಸಾಕಾಣಿಕೆ’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ ತರಬೇತಿ ಕಾರ್ಯಕ್ರಮದ ಸದುಪಯೋಗವನ್ನು ರೈತಾಪಿ ವರ್ಗದವರು ಪಡೆದುಕೊಳ್ಳಲಿದ್ದಾರೆಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಡೀನ್‍ರವರಾದ ಡಾ. ಪ್ರಕಾಶ್ ನಡೂರ್‍ರವರು ಮಕ್ಕಳ ಬೆಳವಣಿಗೆಯಲ್ಲಿ ಅತ್ಯವಶ್ಯಕವಾದ ಗುಣಮಟ್ಟದ ಪ್ರೋಟೀನ್ ಪೂರೈಕೆಯಲ್ಲಿ ಕುಕ್ಕುಟೊದ್ಯಮದ ಪಾತ್ರ ಮಹತ್ವದ್ದು ಎಂದರು. ಪಶುವೈದ್ಯಕೀಯ ಜಾನುವಾರು ಸಾಕಾಣಿಕ ಸಂಕೀರ್ಣದ ವಿಭಾಗದ ಮುಖ್ಯಸ್ಥರು ಡಾ.ಟಿ.ತಿರುಮಲೇಶ್‍ರವರು ತರಬೇತಿ ಕಾರ್ಯಕ್ರಮದ ರೂಪು ರೇಷೆಗಳನ್ನು ಮತ್ತು ಸದಾಶಯವನ್ನು ವಿವರಿಸಿದರು. ಡಾ.ಭರತ್ ಭೂಷಣ್.ಎಮ್‍ರವರ ನಿರ್ದೇಶನದಲ್ಲಿ ಮೂಡಿ ಬಂದ ಅರ್ಥಪೂರ್ಣ ತರಬೇತಿ ಕಾರ್ಯಕ್ರಮ ಮತ್ತು ಪ್ರಾತ್ಯಕ್ಷಿತೆಯಲ್ಲಿ ರಾಜ್ಯ ವಿವಿಧ ಜಿಲ್ಲೆಗಳ ಸುಮಾರು 40 ಜನ ಭಾಗವಹಿಸಿದ್ದರು.

error: Content is protected !!