ಶಿವಮೊಗ್ಗ, ಮಾ.26. : ಭಾರತ ಅತಿಹೆಚ್ಚು ಗ್ರಾಹಕರನ್ನೊಳಗೊಂಡ ದೇಶವಾಗಿದ್ದು, ಸರಕು ಸೇವೆಗಳಲ್ಲಿ ಹೆಚ್ಚು ಬೇಡಿಕೆ ಹೊಂದಿರುವಂತಹ ರಾಷ್ಟ್ರವಾಗಿದೆ. ಇದರೊಂದಿಗೆ ಹೆಚ್ಚು ಮೊಸಕ್ಕೊಳಗಾಗುವ ಗ್ರಾಹಕರೂ ಭಾರತೀಯರೇ ಆಗಿದ್ದು ಗ್ರಾಹಕರು ಶಿಕ್ಷಿತರಾಗುವ ಅವಶ್ಯಕತೆಯಿದೆ ಎಂದು ಜಿಲ್ಲಾಧಿಕಾರಿ ಕೆ.ಎ ದಯಾನಂದ್ ಹೇಳಿದರು.
ನಗರದ ಎಸ್.ವಿ.ಕೆ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ‘ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಗ್ರಾಹಕರು ತೂಕ, ಗುಣಮಟ್ಟ, ಬೆಲೆ ಹಾಗೂ ಪ್ರಮಾಣ ಇನ್ನಿತರೆ ವಿಷಯಗಳಲ್ಲಿ ಮೋಸಕ್ಕೊಳಗಾಗುತ್ತಾರೆ ಈ ಕುರಿತು ಪ್ರತಿಯೊಬ್ಬ ವ್ಯಕ್ತಿಯು ಜಾಗೃತನಾಗಬೇಕು ಎಂದು ಅವರು ಹೇಳಿದರು.
ಪ್ರತಿಯೊಬ್ಬ ವ್ಯಕ್ತಿಯು ಹುಟ್ಟಿನಿಂದ ಸಾವಿನವರೆಗೂ ನೇರವಾಗಿ ಗ್ರಾಹಕನಾಗಿರುತ್ತಾ£.É ಇದರಿಂದ ಗ್ರಾಹಕರಲ್ಲಿ ಜಾಗೃತೆ ಮೂಡಬೇಕಿರುವುದು ಅನಿವಾರ್ಯವಾಗಿದೆ. ಯಾವುದೇ ಸಾಮಾಗ್ರಿಗಳನ್ನು ಕೊಳ್ಳುವಾಗ ತೂಕ, ಬೆಲೆ, ಪ್ರಮಾಣ, ಪರಿಶುದ್ಧತೆ ಕುರಿತಾದ ಮಾಹಿತಿಯನ್ನು ಗಮನಿಸಬೇಕು ಹಾಗೂ ಮಾರಾಟಗಾರರು ಸರಿಯಾದ ತೂಕ ಸರಿಯಾದ ಬೆಲೆಗೆ ಮಾರಾಟ ಮಾಡಬೇಕು. ಇದನ್ನು ಉಲ್ಲಂಘಸಿದಲ್ಲಿ 10ಲಕ್ಷದ ವರೆಗಿನ ದಂಡ ಹಾಗೂ ಎರಡು ವರ್ಷಗಳ ಕಾಲ ಕಾರಾಗೃಹ ಶಿಕ್ಷೆಯನ್ನು ಕಾನೂನಿನಡಿ ವಿಧಿಸಬಹುದಾಗಿದೆ. ಇಂತಹ ಕಾನೂನು ಇದ್ದರು ಸಹ ಗ್ರಾಹಕರಿಗೆ ವಂಚನೆ ತಪ್ಪಿಲ್ಲ. ಇದನ್ನು ಗ್ರಾಹಕರು ಮನವರಿಕೆ ಮಾಡಿಕೊಂಡು ಸಾಗುವ ಅವಶ್ಯಕತೆಯಿದೆ ಎಂದು ಅವರು ಹೇಳಿದರು.
ಇತ್ತೀಚೆಗೆ ಭಾರತದಲ್ಲಿ ಕೊಳ್ಳುಬಾಕ ಸಂಸ್ಕøತಿ ಹೆಚ್ಚುತ್ತಿದ್ದು, ಇದರಲ್ಲಿ ಆನ್‍ಲೈನ್ ಮಾರುಕಟ್ಟೆಯ ಪಾತ್ರ ಮಹತ್ವ ಹೆಚ್ಚಾಗಿದೆ. ನೇರವಾಗಿಯೆ ಹೆಚ್ಚಿನ ಪ್ರಮಾಣದಲ್ಲಿ ಮೋಸ ಹೋಗುವ ಗ್ರಾಹಕರಿರುವಾಗ ಆನ್‍ಲೈನ್ ಮೂಲಕ ಕೊಳ್ಳುವ ಸಂಸ್ಕøತಿಯಲ್ಲಾಗುವ ಮೋಸದ ಪ್ರಮಾಣದ ಕುರಿತು ಅರಿಯುವ ಅಗತ್ಯತೆಯಿದೆ ಎಂದು ಅವರು ಹೇಳಿದರು.
ರೈತರು ಗ್ರಾಹಕರಾಗಿ ಮತ್ತು ಮಾರಾಟಗಾರರಾಗಿ ಹೆಚ್ಚಿನ ಪ್ರಮಾಣದಲ್ಲಿ ಮೋಸ ಹೋಗುವಂತವರಾಗಿದ್ದಾರೆ. ಅವರು ಒಂದು ವರ್ಷ ಕಷ್ಟಪಟ್ಟು ಬೆಳೆದ ಬೆಳೆಯನ್ನು ಮಾರಾಟಮಾಡಿ ಪಡೆಯುವ ಹಣಕ್ಕಿಂತಲೂ ಅದನ್ನು ಕೊಂಡುಕೊಂಡು ಅರ್ಧಗಂಟೆ ಕುಳಿತು ಮಾರಾಟ ಮಾಡುವವನು ಹೆಚ್ಚಿನ ಲಾಭಗಳಿಸುತ್ತಾನೆ ಇಂತಹ ವಿಷಯಗಳಲ್ಲಿ ರೈತರು ಸಹ ಜಾಗ್ರತರಾಗುವ ಅವಶ್ಯಕತೆ ಇದೆ ಎಂದು ಅವರು ಹೇಳಿದರು.
ಬಳಕೆದಾರರ ವೇದಿಕೆ ಕಾರ್ಯದರ್ಶಿ ಬಿ.ಎಸ್ ನಾಗರಾಜ್ ಮಾತನಾಡಿ ಗ್ರಾಹಕರಲ್ಲಿ ಮಾಹಿತಿಯ ಕೊರತೆಯಿಂದಾಗಿ ಶೋಷಣೆಗೊಳಗಾಗುತ್ತಿದ್ದಾರೆ. ಈ ಸಲುವಾಗಿ ಇರುವ ಕಾನೂನುಗಳನ್ನು ಬಳಸಿಕೊಂಡು ಶೋಷಣೆಯ ವಿರುದ್ಧ ದ್ವನಿ ಎತ್ತಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಮೊದಲು ಕೊಂಡುಕೊಳ್ಳುವ ಗ್ರಾಹಕ ಮಾತ್ರ ಸರಕು ಮತ್ತು ಸೇವೆಯ ಜವಾಬ್ದಾರನಾಗಿರುತ್ತಾನೆ ಎಂದು ಹೇಳಲಾಗುತ್ತಿತ್ತು. ಆದರೆ ಇಂದು ಅದು ಬದಲಾಗಿ ಮಾರಾಟಗಾರ ಜವಾಬ್ದಾರ ಎಂಬ ಕಾನೂನು ಸಹ ರಚನೆಯಾಗಿದೆ. ಇತ್ತೀಚೆಗೆ ಆನ್‍ಲೈನ್ ಮಾರುಕಟ್ಟೆಯಲ್ಲಿನ ವ್ಯವಹಾರಗಳಿಗೂ ಸಹ ಇದು ಅನ್ವಯಿಸುತ್ತದೆ ಎಂದು ಸುಪ್ರಿಂ ಕೋರ್ಟ್ ಹೇಳಿದ್ದು ಗ್ರಾಹಕರ ನೆರವಿಗೆ ನ್ಯಾಯಾಲಯ ನಿಂತಿದೆ. ಆ ಕಾರಣಕ್ಕಾಗಿ ಸಾರ್ವಜನಿಕರು ಇಂತಹ ವ್ಯವಹಾರಗಳಲ್ಲಿ ಆಗುವ ಅನ್ಯಾಯಗಳ ವಿರುದ್ಧ ದ್ವನಿ ಎತ್ತಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೋಮಶೇಖರ್. ಸಿ. ಬಾದಾಮಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಶಿಕ್ಷಣ ಸಮಿತಿ ಕುಲಸಚಿವ ಟಿ.ಎಸ್ ಹೂವಯ್ಯ, ಜಿಲ್ಲಾ ಬಳಕೆದಾರರ ವೇದಿಕೆ ಅಧ್ಯಕ್ಷ ಬಿ.ವಿ. ಗೋಪಾಲಕೃಷ್ಣ ಮುಂತಾದ ಗಣ್ಯರು ಉಪಸ್ಥಿತರಿದ್ದರು.

error: Content is protected !!