ಶಿವಮೊಗ್ಗ, ಜೂನ್ 06 : ಕರ್ನಾಟಕ ಭೋವಿ ಅಭಿವೃದ್ಧಿ ನಿಗಮವು ಶಿವಮೊಗ್ಗ ಜಿಲ್ಲೆಯಿಂದ ಪ್ರಸಕ್ತ ಸಾಲಿಗೆ ಉದ್ಯಮಶೀಲತಾ ಅಭಿವೃದ್ಧಿ ಯೋಜನೆ, ಪ್ರೇರಣಾ ಯೋಜನೆ ಹಾಗೂ ಗಂಗಾ ಕಲ್ಯಾಣ ಯೋಜನೆಗೆ 18 ರಿಂದ 60 ವರ್ಷ ವಯೋಮಿತಿಯೊಳಗಿನ ಅರ್ಹ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಈ ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಜಿದಾರರು ಪರಿಶಿಷ್ಟ ಜಾತಿ ಭೋವಿ ಜನಾಂಗಕ್ಕೆ ಸೇರಿದವರಾಗಿದ್ದು, 15 ವರ್ಷಗಳಿಂದ ಕರ್ನಾಟಕ ರಾಜ್ಯ ನಿವಾಸಿಯಾಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದವರಿಗೆ ರೂ. 1.50 ಲಕ್ಷ ಹಾಗೂ ನಗರ ಪ್ರದೇಶದವರಿಗೆ ರೂ. 2.00 ಲಕ್ಷ ಮಿತಿಯಲ್ಲಿರಬೇಕು. ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ/ಅರೆ ಸರ್ಕಾರಿ ಸಂಸ್ಥೆಯಲ್ಲಿ ನೌಕರಿಯಲ್ಲಿರಬಾರದು ಹಾಗೂ ಈ ಹಿಂದೆ ನಿಗಮದಿಂದ ಯಾವುದೇ ಸೌಲಭ್ಯ ಪಡೆದಿರಬಾರದು. ಜಿಲ್ಲೆಯಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಈಗಾಗಲೇ ನೊಂದಣಿ ಮಾಡಿಕೊಂಡಿರುವ ಪ.ಜಾ. ಭೋವಿ ಜನಾಂಗಕ್ಕೆ ಸೇರಿರುವ ಫಲಾನುಭವಿಗಳ ಲಭ್ಯವಿರುವ ಪಟ್ಟಿಯಿಂದ ಅಂಗವಿಕಲರನ್ನು ನೇರವಾಗಿ ಸಂದರ್ಶನ ಮಾಡಿ, ಶೆ. 5 ರಷ್ಟು ಮೀಸಲಾತಿಯನ್ನು ನೀಡಿ ಸೌಲಭ್ಯ ಕಲ್ಪಿಸಲಾಗುವುದು. ವಾಹನಗಳಿಗೆ ಸೌಲಭ್ಯ ಪಡೆಯಲು ಡ್ರೈವಿಂಗ್ ಲೈಸೆನ್ಸ್‍ನೊಂದಿಗೆ ಬ್ಯಾಡ್ಜ್‍ನ್ನು ಹೊಂದಿರಬೇಕು. ಗಂಗಾಕಲ್ಯಾಣ ಯೋಜನೆಯಡಿ ಸೌಲಭ್ಯ ಪಡೆಯಲು ಕನಿಷ್ಠ ಒಂದು ಎಕರೆ ಗರಿಷ್ಟ ಐದು ಎಕರೆ ಜಮೀನು ಹೊಂದಿದ್ದು ಸಣ್ಣ ಮತ್ತು ಅತೀ ಸಣ್ಣ ರೈತರಾಗಿರಬೇಕು.
ಆಸಕ್ತ ಅಭ್ಯರ್ಥಿಗಳು ನಿಗಧಿತ ನಮೂನೆ ಅರ್ಜಿಯನ್ನು ಆಯಾ ಜಿಲ್ಲಾ ಡಾ|| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ನಿಗಮದ ಕೇಂದ್ರ ಕಚೇರಿಯಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಜುಲೈ 31ರೊಳಗಾಗಿ ಸಲ್ಲಿಸುವುದು.
ಮಾಹಿತಿಗಾಗಿ ದೂ.ಸಂ.: 08182-224349ನ್ನು ಸಂಪರ್ಕಿಸುವುದು.

error: Content is protected !!