ಶಿವಮೊಗ್ಗ: : ರೈತರ ಸಾಲಮನ್ನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆ ಪ್ರಕ್ರಿಯೆಗಳನ್ನು ತ್ವರಿತಗೊಳಿಸುವಂತೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ತಿಳಿಸಿದರು.
ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತರ ಬೆಳೆ ಸಾಲ ಮನ್ನಾ ಪ್ರಕ್ರಿಯೆಯ ಪ್ರಗತಿ ಪರಿಶೀಲನೆ ನಡೆಸಿದರು.
ಬೆಳೆ ಸಾಲಮನ್ನಾ ಪ್ರಕ್ರಿಯೆ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿದೆ. ಜಿಲ್ಲೆಯ ಸಹಕಾರ ಬ್ಯಾಂಕುಗಳಲ್ಲಿ 33886 ಅರ್ಹ ರೈತರು ಒಟ್ಟು 166ಕೋಟಿ ರೂ. ಸಾಲ ಮಾಡಿದ್ದು, ಇದರಲ್ಲಿ ಒಂದು ಲಕ್ಷದವರೆಗಿನ ಸಾಲದ ಮೊತ್ತ 139ಕೋಟಿ ರೂ. ಇದೆ. ಇವರ ಪೈಕಿ 1480 ರೈತರು ಸುಸ್ತಿದಾರರಿದ್ದಾರೆ. ಸಹಕಾರ ಬ್ಯಾಂಕುಗಳ ಸಾಲಕ್ಕೆ ಸಂಬಂಧಿಸಿದಂತೆ 21808 ರೈತರ 74.4 ಕೋಟಿ ರೂ. ಸಾಲಮನ್ನಾ ಮೊತ್ತವನ್ನು ಸಂಬಂಧಿಸಿದ ಬ್ಯಾಂಕುಗಳಿಗೆ ಬಿಡುಗಡೆ ಮಾಡಲಾಗಿದೆ. 859ಪ್ರಕರಣಗಳಲ್ಲಿ ಬ್ಯಾಂಕು ಖಾತೆಗಳು ತಾಳೆಯಾಗದ ಕಾರಣ ವಿಲೇವಾರಿಗೆ ಬಾಕಿ ಇವೆ. ಇದರ ಮೊತ್ತ 3.10ಕೋಟಿ ರೂ. ಇದೆ. ಈ ಪ್ರಕರಣಗಳನ್ನು ಆದಷ್ಟು ಬೇಗನೆ ಇತ್ಯರ್ಥಪಡಿಸಬೇಕು ಎಂದು ಅವರು ತಿಳಿಸಿದರು.
ಈಗಾಗಲೇ ಭದ್ರಾವತಿ ತಾಲೂಕಿನ 3591 ರೈತರ 18ಕೋಟಿ ರೂ, ಹೊಸನಗರದ 2805 ರೈತರ 7.27ಕೋಟಿ ರೂ., ಸಾಗರದ 2805ರೈತರ 7.61ಕೋಟಿ ರೂ, ಶಿಕಾರಿಪುರದ 4524ರೈತರ 11.91ಕೋಟಿ ರೂ, ಶಿವಮೊಗ್ಗ ತಾಲೂಕಿನ 3547ರೈತರ 12.62 ಕೋಟಿ ರೂ, ಸೊರಬದ 1492 ರೈತರ 6.89 ಕೋಟಿ ರೂ, ತೀರ್ಥಹಳ್ಳಿ ತಾಲೂಕಿನ 3044 ರೈತರ 10ಕೋಟಿ ರೂ ಸಾಲ ಮನ್ನಾದ ಅನುದಾನವನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಪಡೆದುಕೊಂಡಿರುವ 55146 ರೈತರು ಸಾಲಮನ್ನಾ ಸೌಲಭ್ಯಕ್ಕೆ ಅರ್ಹರಿದ್ದು, ಇವರ ಪೈಕಿ 54ಸಾವಿರ ರೈತರು ನಿಗದಿತ ದಾಖಲೆಗಳನ್ನು ಒದಗಿಸಿದ್ದು, 130ಕೋಟಿ ರೂ. ಸಾಲ ಮನ್ನಾ ಸೌಲಭ್ಯ ಪಡೆಯಲಿದ್ದಾರೆ. ಪರಿಶೀಲನೆಗೆ ಬಾಕಿ ಇರುವ 1056ಅರ್ಜಿಗಳನ್ನು ಆದಷ್ಟು ಬೇಗನೆ ಪರಿಶೀಲಿಸಿ ವಿಲೇವಾರಿ ಮಾಡಬೇಕು. ಸಾಲಮನ್ನಾ ಅನುದಾನ ಬಿಡುಗಡೆಯಾದ ತಕ್ಷಣ ಮನ್ನಾ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಆಯಾ ಬ್ಯಾಂಕ್ ಮ್ಯಾನೇಜರ್‍ಗಳು ಯಾವುದೇ ಅರ್ಜಿಯನ್ನು ಬಾಕಿಯಿರಿಸದೆ ಸಂಬಂಧಪಟ್ಟ ತಹಶೀಲ್ದಾರ್ ಜತೆ ಚರ್ಚಿಸಿ ಪರಿಶೀಲನೆ ನಡೆಸಿ ತಕ್ಷಣ ಶೇ.100ರಷ್ಟು ವಿಲೇವಾರಿ ಮಾಡಬೇಕು ಎಂದು ಅವರು ತಿಳಿಸಿದರು.
ಉಪವಿಭಾಗಾಧಿಕಾರಿ ಪ್ರಕಾಶ್, ಲೀಡ್ ಬ್ಯಾಂಕ್ ಮ್ಯಾನೇಜರ್ ಸೋಲೊಮನ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!