ಶಿವಮೊಗ್ಗ, ಏಪ್ರಿಲ್ 17 : ಏಪ್ರಿಲ್ 23ರಂದು ನಡೆಯಲಿರುವ ಶಿವಮೊಗ್ಗ ಲೋಕಸಭಾ ಚುನಾವಣೆಗೆ ನಿಯೋಜಿತರಾದ ಎಲ್ಲಾ ನೌಕರರು ತಮ್ಮ ಜಬಾವ್ದಾರಿಯರಿತು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಕೆ.ಎ.ದಯಾನಂದ್ ಅವರು ಹೇಳಿದರು.
ಅವರು ಇಂದು ಜಿಲ್ಲಾಡಳಿತ ಸಭಾಂಗಣದಲ್ಲಿ ಮೈಕ್ರೋ ಆಬ್ಜರ್‍ವರ್‍ಗಳಿಗಾಗಿ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಹಂತದ ಅಧಿಕಾರಿಗಳು ಮತಗಟ್ಟೆಯಲ್ಲಿನ ಸಣ್ಣ ನ್ಯೂನತೆಗಳನ್ನು ಮುಖ್ಯವಾಗಿಟ್ಟುಕೊಳ್ಳದೇ ಚುನಾವಣೆಯನ್ನು ನ್ಯೂನತೆಗಳಿಲ್ಲದಂತೆ ಚುನಾವಣಾ ಆಯೋಗದ ನಿರ್ದೇಶನದಂತೆ ವ್ಯವಸ್ಥಿತವಾಗಿ ನಿರ್ವಹಿಸಲು ಮುಂದಾಗುವಂತೆ ಅವರು ಸಲಹೆ ನೀಡಿದರು.
ಚುನಾವಣಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿ, ಸಿಬ್ಬಂಧಿಗಳು ಮೊದಲು ಮತ ಚಲಾಯಿಸಬೇಕು. ಯಾರೊಬ್ಬರೂ ಕೂಡ ಮತದಾನದಿಂದ ವಂಚಿತರಾಗಬಾರದು ಎಂದ ಅವರು, ಚುನಾವಣಾ ವೀಕ್ಷಕರಾಗಿ ಆಗಮಿಸಿರುವ ಅಧಿಕಾರಿಗಳಿಗೆ ಮೈಕ್ರೋ ಆಬ್ಜರ್‍ವರ್‍ಗಳು ಕಣ್ಣು-ಕಿವಿಗಳಿದ್ದಂತೆ ಎಂದರು.
ಈ ಸಂದರ್ಭದಲ್ಲಿ ತರಬೇತುದಾರರು ಮಾಹಿತಿ ನೀಡಿ, ಮತಗಟ್ಟೆಯಲ್ಲಿ ರಾಜಕೀಯ ಪಕ್ಷದ ಪ್ರತಿನಿಧಿ ಒಬ್ಬರಿಗೆ ಮಾತ್ರ ಅವಕಾಶ. ಹೊರಗಿನ ವ್ಯಕ್ತಿಗಳು ಮತಗಟ್ಟೆ ಪ್ರವೇಶಿಸುವುದನ್ನು ಹಾಗೂ ಚುನಾವಣಾ ಕರ್ತವ್ಯಕ್ಕಾಗಿ ನಿಯೋಜಿತ ಸಿಬ್ಬಂಧಿಗಳಲ್ಲದೇ ಅನ್ಯರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದರು.
ವಯಸ್ಕರು ಅಥವಾ ದುರ್ಬಲರು ಮತಗಟ್ಟೆಗೆ ಆಗಮಿಸಿದ್ದಲ್ಲಿ ಅಂತಹವರಿಗೆ ಸಹಾಯಕರೊಬ್ಬರನ್ನು ಕರೆದೊಯ್ಯಲು ಅವಕಾಶ ನೀಡಬಹುದಾಗಿದೆ. ಗೌಪ್ಯತೆ ಕಾಪಾಡುವ ಹಿನ್ನೆಲೆಯಲ್ಲಿ ಮತದಾನದ ವಿಡಿಯೋ ಚಿತ್ರೀಕರಣ ಕಡ್ಡಾಯವಾಗಿ ನಿಷೇಧಿಸಿದೆ. ಅರ್ಹ ಮತದಾರರು ಖಚಿತಪಡಿಸುವ ಯಾವುದೇ ಒಂದು ರೀತಿಯ ಚುನಾವಣಾ ಆಯೋಗದ ನಿರ್ಧರಿಸಿರುವ ದಾಖಲಾತಿಯೊಂದನ್ನು ಹಾಜರುಪಡಿಸಿ ಮತ ಚಲಾಯಿಸಬಹುದಾಗಿದೆ ಎಂದರು.
ಮತಗಟ್ಟೆಯಲ್ಲಿ ಚುನಾವಣಾ ಆಯೋಗದ ಸೂಚನೆಯಂತೆ ಮತಯಂತ್ರಗಳನ್ನು ವ್ಯವಸ್ಥಿತವಾಗಿ ಜೋಡಿಸಬೇಕು. ಅಣುಕು ಮತದಾನದ ನಂತರ ಅಳಿಸಿ ಹಾಕಬೇಕು. ಯಾವುದೇ ಆತುರ ಮಾಡದೇ ಸಮಾಧಾನವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದ ಅವರು, ಈ ಪ್ರಕ್ರಿಯೆಯನ್ನು ಪಿ.ಆರ್.ಒ.ಗಳು ಮೊಬೈಲ್ ಸೆಲ್ಫಿ ತೆಗೆದು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಕಳುಹಿಸುವಂತೆ ಅವರು ಸೂಚಿಸಿದರು.
ಮತಯಂತ್ರ, ವಿ.ವಿ.ಪ್ಯಾಟ್‍ಗಳು ನಿರ್ವಹಿಸುವ ಕಾರ್ಯ, ಸಂಪರ್ಕದ ಬಗ್ಗೆ ಅರಿವು ಹೊಂದಿರಬೇಕು ಎಂದ ಅವರು, ಈ ಬಾರಿಯ ಚುನಾವಣೆಯಲ್ಲಿ ಮತದಾರನ ಎಡಗೈ ತೋರು ಬೆರಳಿಗೆ ಅಳಿಸಲಾದ ಷಾಯಿ ಹಾಕಲಾಗುವುದು ಎಂದರು.
ಈ ಸಂದರ್ಭದಲ್ಲಿ ಚುನಾವಣಾ ಕರ್ತವ್ಯಕ್ಕಾಗಿ ನಿಯೋಜಿತರಾಗಿರುವ ಚುನಾವಣ ವೀಕ್ಷಕರು, ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!