ಶಿವಮೊಗ್ಗ, ಮೇ19 : ತಂಬಾಕು ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸುವ ವ್ಯಾಪಾರಸ್ಥರ ವಿರುದ್ಧ ಪೊಲೀಸ್ ಕೇಸ್ ದಾಖಲಿಸಿ, ಅಂತಹ ಅಂಗಡಿಗಳ ಪರವಾನಿಗೆ ರದ್ದುಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಸೂಚನೆ ನೀಡಿದರು.
ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮಿತಿ ಸಭೆಯಲ್ಲಿ ಮಾತನಾಡಿದರು.
ಕೋಟ್ಪಾ ಕಾಯ್ದೆಯನ್ವಯ ಸಿಗರೇಟು ಸೇರಿದಂತೆ ತಂಬಾಕು ಉತ್ಪನ್ನಗಳ ಪ್ರತ್ಯಕ್ಷ ಹಾಗೂ ಪರೋಕ್ಷ ಜಾಹೀರಾತನ್ನು ಸಾರ್ವಜನಿಕ ಸ್ಥಳಗಳಲ್ಲಿ ಮಾಡುವಂತಿಲ್ಲ. ಆದರೆ ಹಲವು ಅಂಗಡಿ ಮುಂಗಟ್ಟುಗಳ ಮುಂದೆ ತಂಬಾಕು ಉತ್ಪನ್ನಗಳ ಪರೋಕ್ಷ ಜಾಹೀರಾತು ಇರುವುದು ಕಂಡು ಬಂದಿದ್ದು, ಆರೋಗ್ಯ ಇಲಾಖೆ ಅಂತಹ ಅಂಗಡಿಗಳ ಪಟ್ಟಿಯನ್ನು ಮಾಡಿ ಪ್ರಕರಣ ದಾಖಲಿಸಲು ಸ್ಥಳೀಯ ಪೊಲೀಸ್ ಠಾಣೆಗೆ ಸಲ್ಲಿಸಬೇಕು. ಅಂತಹ ಅಂಗಡಿಗಳ ಪರವಾನಿಗೆ ರದ್ದತಿಗೆ ಕೋರಿ ಸ್ಥಳೀಯ ಸಂಸ್ಥೆಗೆ ಶಿಫಾರಸು ಮಾಡಿ ಈ ಕುರಿತು ವರದಿಯನ್ನು ಸಲ್ಲಿಸುವಂತೆ ಅವರು ತಿಳಿಸಿದರು.
ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ ಕೋಟ್ಪಾ ಕಾಯ್ದೆಯ 970 ಉಲ್ಲಂಘನೆ ಪ್ರಕರಣಗಳಲ್ಲಿ 5340ರೂ. ದಂಡ ವಿಧಿಸಲಾಗಿದೆ. ಇದುವರೆಗೆ ಒಟ್ಟು 5010 ಉಲ್ಲಂಘನೆ ಪ್ರಕರಣಗಳಲ್ಲಿ 227495ರೂ. ದಂಡ ವಸೂಲು ಮಾಡಲಾಗಿದೆ. 2020ರ ಒಳಗಾಗಿ ಜಿಲ್ಲೆಯಲ್ಲಿ ತಂಬಾಕು ಸೇವನೆ ಪ್ರಮಾಣವನ್ನು ಶೇ.5ರಷ್ಟು ತಗ್ಗಿಸುವ ಗುರಿಯನ್ನು ಹೊಂದಲಾಗಿದೆ ಎಂದು ನಿಯಂತ್ರಣಾಧಿಕಾರಿ ಡಾ.ಶಂಕರಪ್ಪ ಅವರು ಮಾಹಿತಿ ನೀಡಿದರು.
ಜಾಗೃತಿ ಆಂದೋಲನ: ಜಿಲ್ಲೆಯಲ್ಲಿ ತಂಬಾಕು ಮಾತ್ರವಲ್ಲದೆ ಮಾದಕ ಪದಾರ್ಥಗಳಿಗೆ ವಿದ್ಯಾರ್ಥಿ ಯುವಜನತೆ ಒಳಗಾಗುತ್ತಿರುವ ಪ್ರಕರಣಗಳು ಗಂಭೀರ ಪ್ರಮಾಣದಲ್ಲಿ ಹೆಚ್ಚಾಗುತ್ತಿವೆ. ಇದರ ನಿಯಂತ್ರಣಕ್ಕೆ ಕಾನೂನಾತ್ಮಕ ಕ್ರಮಗಳನ್ನು ಬಲಪಡಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಮಾದಕ ಪದಾರ್ಥಗಳ ವಿರುದ್ಧ ವಿದ್ಯಾರ್ಥಿ ಯುವಜನರಲ್ಲಿ ಜಾಗೃತಿ ಆಂದೋಲನ ಮೂಡಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ನಕಲಿ ವೈದ್ಯರ ವಿರುದ್ಧ ಕ್ರಮ: ಜಿಲ್ಲೆಯಲ್ಲಿ ನಕಲಿ ವೈದ್ಯರ ಬಗ್ಗೆ ನಿರಂತರ ದೂರುಗಳು ಬರುತ್ತಿದ್ದು, ಪ್ರತಿಯೊಂದು ಕ್ಲಿನಿಕ್‍ಗಳಲ್ಲಿ ಕೆಪಿಎಂಎ ನೋಂದಣಿ ಪರಿಶೀಲನೆ ನಡೆಸಬೇಕು. ಅಧಿಕೃತ ನೋಂದಣಿ ಇಲ್ಲದ ಕ್ಲಿನಿಕ್‍ಗಳನ್ನು ಮುಚ್ಚಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಹೇಳಿದರು.
ಅಪರ ಜಿಲ್ಲಾಧಿಕಾರಿ ಪೂರ್ಣಿಮಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


error: Content is protected !!