News Next

ಶಿವಮೊಗ್ಗ, ಜುಲೈ 31 : ಕರ್ತವ್ಯನಿರತ ರಾಜ್ಯ ಸರ್ಕಾರಿ ನೌಕರರು ಕೊರೋನ ಸೋಂಕಿನಿಂದ ಮೃತಪಟ್ಟಲ್ಲಿ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ನೌಕರರಿಗೂ ಅನ್ವಯವಾಗುವಂತೆ ಪರಿಹಾರ ಮತ್ತು ವಿಮಾ ಸೌಲಭ್ಯವನ್ನು ಮಂಜೂರು ಮಾಡಿ ಆದೇಶ ಹೊರಡಿಸಿದ ಹಾಗೂ ಸಂಘದ ಮನವಿಗೆ ಪೂರಕವಾಗಿ ಸ್ಪಂದಿಸಿದ ಮಾನ್ಯ ಮುಖ್ಯಮಂತ್ರಿ ಬಿ.ಎಎಸ್.ಯಡಿಯೂರಪ್ಪನವರಿಗೆ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೇಂದ್ರ ಸರ್ಕಾರದ ನಿರ್ದೇಶನದಂತೆ ಕೋವಿಡ್-19 ಕರ್ತವ್ಯನಿರತ ಅವಶ್ಯಕ ಇಲಾಖೆಗಳ ನೌಕರರು ಮೃತಪಟ್ಟ ಸಂದರ್ಭದಲ್ಲಿ ಮಾತ್ರ ವಿಮಾ ಪರಿಹಾರ ಮೊತ್ತವನ್ನು ನೀಡುತ್ತಿರುವುದು ಇಲಾಖೆಗಳ ನಡುವೆ ತಾರತಮ್ಯ ಮಾಡಿದಂತಾಗುತ್ತಿತ್ತು. ಅಲ್ಲದೇ ಇತ್ತೀಚೆಗೆ ಈರ್ವರು ಶಿಕ್ಷಕರು ಮೃತರಾಗಿರುವ ಬಗ್ಗೆ ಸಂಘದ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ಕಾರ್ಯದರ್ಶಿಗಳಿಗೆ ಮನವಿ ಮಾಡಿ, ಸರ್ಕಾರಿ ನೌಕರರೆಲ್ಲರಿಗೂ ಏಕರೀತಿಯ ಪರಿಹಾರ ಹಾಗೂ ವಿಮಾ ಸೌಲಭ್ಯ ದೊರೆಕಿಸುವಂತೆ ಆದೇಶ ಹೊರಡಿಸಲು ಕೋರಲಾಗಿತ್ತು ಎಂದು ಸಿ.ಎಸ್.ಷಡಾಕ್ಷರಿ ಅವರು ತಿಳಿಸಿದ್ದಾರೆ.
ಈ ಮೊದಲು ಕೋವಿಡ್-19 ಕರ್ತವ್ಯನಿತರ ಅವಶ್ಯಕ ಇಲಾಖೆಯ ಅಧಿಕಾರಿ, ನೌಕರರು ಮೃತರಾದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ನಿರ್ದೇಶನದಂತೆ ಆರೋಗ್ಯ, ನಗರಾಭಿವೃದ್ಧಿ ಹಾಗೂ ಪೊಲೀಸ್ ಇಲಾಖೆಗೆ ಮಾತ್ರ ವಿಮಾ ಪರಿಹಾರ ಮೊತ್ತವನ್ನು ನೀಡಲಾಗುತ್ತಿತ್ತು ಎಂದು ತಿಳಿಸಿರುವ ಅವರು, ಸೀಮಿತ ಇಲಾಖೆಗಳಲ್ಲದೆ ಇನ್ನೂ ಹಲವು ಇಲಾಖೆಗಳ ನೌಕರರು, ಅಧಿಕಾರಿಗಳು ಕೂಡ ಕೋವಿಡ್ ಕರ್ತವ್ಯದಲ್ಲಿ ನಿರತರಾಗಿರುವುದನ್ನು ಸರ್ಕಾರದ ಗಮನಕ್ಕೆ ತರಲಾಗಿತ್ತು ಎಂದವರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಪಂಚಾಯಿತಿಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರ ವಿರುದ್ಧ ಇರುವ ಇಲಾಖಾ ವಿಚಾರಣೆ ಪ್ರಕರಣಗಳನ್ನು ಇತ್ಯರ್ಥಪಡಿಸಿ, ಮುಂದಿನ ಒಂದು ವಾರದೊಳಗಾಗಿ ಮುಂಬಡ್ತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.

error: Content is protected !!