ಶಿವಮೊಗ್ಗ, ಜುಲೈ 21 : ಕೇಂದ್ರ ಪುರಸ್ಕøತ ಜನಪರ ಯೋಜನೆಗಳನ್ನು ಜನಸಾಮಾನ್ಯರಿಗೆ ಹಾಗೂ ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಜಿಲ್ಲೆಯ ಬ್ಯಾಂಕ್ ಅಧಿಕಾರಿ-ಸಿಬ್ಬಂಧಿಗಳು ಪ್ರಾಮಾಣಿಕವಾಗಿ ಶ್ರಮಿಸುತ್ತಿರುವುದು ಅಭಿನಂದನೀಯ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.
ಅವರು ಇಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‍ನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಧಾನಮಂತ್ರಿ ಸಾಮಾಜಿಕ ಭದ್ರತಾ ಯೋಜನೆಗಳಡಿಯಲ್ಲಿ ಫಲಾನುಭವಿಗಳಿಗೆ ಸಾಲಸೌಲಭ್ಯ ಹಾಗೂ ಸಹಾಯಧನದ ಚೆಕ್‍ನ್ನು ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಅನೇಕ ಸಮಸ್ಯೆ ಸವಾಲುಗಳ ಮದ್ಯೆಯೂ ಬ್ಯಾಂಕಿನ ಸಿಬ್ಬಂಧಿಗಳ ಸೇವೆ ನಿರಂತರವಾಗಿದೆ ಎಂದ ಅವರು ಮಾನ್ಯ ಪ್ರಧಾನಮಂತ್ರಿಗಳು ಜನಸಾಮಾನ್ಯರಿಗೆ ತ್ವರಿತಗತಿಯಲ್ಲಿ ಸೇವೆಯನ್ನು ಸಲ್ಲಿಸುವ ಸದುದ್ದೇಶದಿಂದ ರಾಷ್ಟ್ರೀಯ ಬ್ಯಾಂಕುಗಳನ್ನು ವಿಲೀನ ಮಾಡಿ, ಅನವಶ್ಯಕ ಖರ್ಚು-ವೆಚ್ಚಗಳನ್ನು ಕಡಿಮೆ ಮಾಡಲಾಗುತ್ತಿದೆ ಎಂದವರು ನುಡಿದರು.
ಜಿಲ್ಲೆಯಲ್ಲಿ ಜನ್‍ಧನ್ ಯೋಜನೆಯಡಿ ಈಗಾಗಲೆ 1.80ಲಕ್ಷ ಖಾತೆಗಳು ಆರಂಭವಾಗಿವೆ. ಜೀರೋ ಬ್ಯಾಲೆನ್ಸ್ ಹೊಂದಿರುವ ಖಾತೆದಾರರಿಗೆ ಓವರ್ ಡ್ರಾಫ್ಟ್ ಸೌಲಭ್ಯ ಅಂದರೆ 5, 10 ಅಥವಾ 20ಸಾವಿರ ರೂ.ಗಳ ಸಾಲದ ಮೊತ್ತ ದೊರೆಯಲಿದೆ. ಕೃಷಿ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ ಸಹಾಯಧನ ಸೌಲಭ್ಯ ವಿತರಿಸಲಾಗಿದೆ. ಖಾತೆ ಆರಂಭಿಸಿದ ಫಲಾನುಭವಿಗಳು ಕಾಲಕಾಲಕ್ಕೆ ಖಾತೆಯನ್ನು ನವೀಕರಿಸಿಕೊಳ್ಳಬೇಕು. ಸಾಲಸೌಲಭ್ಯ ಪಡೆದ ಫಲಾನುಭವಿಗಳು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿ, ಸರ್ಕಾರದ ಯೋಜನೆಗಳು ಸಫಲಗೊಳ್ಳುವಲ್ಲಿ ಸಹಕರಿಸಬೇಕು. ಇದರಿಂದಾಗಿ ಯೋಜನೆಗಳು ಮುಂದುವರೆದು ಇತರರಿಗೆ ಪ್ರಯೋಜನ ಲಭಿಸಲಿದೆ ಎಂದವರು ನುಡಿದರು.
ಪ್ರಧಾನಮಂತ್ರಿ ಆತ್ಮನಿರ್ಬರ ಯೋಜನೆಯಡಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ನೀಡಲಾಗುತ್ತಿದ್ದು, ಸರ್ಕಾರ ಯೋಜನೆಯನ್ನು ಘೋಷಿಸಿದ ಅತ್ಯಲ್ಪ ಅವಧಿಯಲ್ಲಿ ಶೇ.70ರಷ್ಟು ಜನರಿಗೆ ಯೋಜನೆಯ ಲಾಭ ದೊರೆತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಜಿಲ್ಲೆಯ 5000ಜನರಿಗೆ 107ಕೋಟಿ ರೂ.ಗಳ ಸಾಲಸೌಲಭ್ಯ ವಿತರಿಸಲಾಗಿದೆ ಎಂದರು.
ಪ್ರಧಾನ ಮಂತ್ರಿ ಜೀವನಜ್ಯೋತಿ ಬಿಮಾಯೋಜನೆಯಡಿ ವಿಮಾದಾರನ ಮರಣದ ನಂತರ ಅವರ ಕುಟುಂಬದ ಅವಲಂಬಿತರಿಗೆ 2ಲಕ್ಷ ರೂ.ಗಳ ಮೊತ್ತವನ್ನು ಪಾವತಿಸಲಾಗುತ್ತದೆ. ತಲಾ 2ಲಕ್ಷ ರೂ.ಗಳಂತೆ ಜಿಲ್ಲೆಯ 11ಜನರಿಗೆ 22ಲಕ್ಷ ರೂ.ಗಳ ಸೌಲಭ್ಯವನ್ನು ವಿತರಿಸಲಾಗಿದೆ ಎಂದ ಅವರು, ರೂ.12/- ಸದಸ್ಯತ್ವ ಶುಲ್ಕ ಪಾವತಿಸಿ ಸದಸ್ಯತ್ವ ಪಡೆದವರಿಗೆ ಈ ಯೋಜನೆಯಿಂದ ಆಪತ್ಕಾಲದಲ್ಲಿ ನೆರವು ದೊರೆಯಲಿದೆ ಎಂದರು.
ಅಲ್ಲದೇ ಬೀದಿಬದಿ ವ್ಯಾಪಾರಗಳಿಗೆ ಶೇ.4ರ ಬಡ್ಡಿದರದಲ್ಲಿ ರೂ.10,000ಗಳ ಬಂಡವಾಳ ಸಾಲ ನೀಡಲಾಗುತ್ತಿದೆ. ಕಿಸಾನ್ ಕೃಷಿ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಯಾವುದೇ ಅಡಮಾನವಿಲ್ಲದೆ 1.5ಲಕ್ಷ ರೂ.ಗಳವರೆಗೆ ಸಾಲಸೌಲಭ್ಯ ದೊರೆಯಲಿದೆ. ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯಡಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 1.50ಲಕ್ಷ ರೂ.ಗಳವರೆಗೆ ಕುಟುಂಬಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ 18ನೇ ಸ್ಥಾನದಲ್ಲಿದ್ದ ಜಿಲ್ಲೆ 2ನೇ ಸ್ಥಾನ ಪಡೆದಿದೆ ಎಂದ ಅವರು, ಈ ಎಲ್ಲಾ ಯೋಜನೆಗಳಡಿಯಲ್ಲಿ ಸಾರ್ವಜನಿಕರು ಸೌಲಭ್ಯ ಪಡೆದು ಜೀವನ ಗುಣಮಟ್ಟ ಸುಧಾರಿಸಿಕೊಳ್ಳುವಂತೆ ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‍ನ ಪ್ರಾದೇಶಿಕ ವ್ಯವಸ್ಥಾಪಕ ಸುಧಾಕರ್ ಕೊಟಾರಿ, ಶ್ರೀಮತಿ ಪೂರ್ಣಿಮ ಎನ್.ರಾವ್, ಡಿ.ಎಸ್.ಅರುಣ್ ಮುಂತಾದವರು ಉಪಸ್ಥಿತರಿದ್ದರು.

error: Content is protected !!