ಶಿವಮೊಗ್ಗ, ಏ.5 ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ದಲಿತ ಚಳುವಳಿಗಳ ಎರಡು ಕಣ್ಣು ಎಂದು ಜಿಲ್ಲಾಧಿಕಾರಿ ಕೆ.ಎ ದಯಾನಂದ್ ಅಭಿಪ್ರಾಯಪಟ್ಟರು.
ನಗರಗದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಬಾಬು ಜಗಜೀವನ್ ರಾಮ್‍ರ 112ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿ ಇಂದಿಗೂ ಸಹ ದಲಿತರ ಮೇಲಿನ ದೌರ್ಜನ್ಯವನ್ನು ಕಾಣುತ್ತೇವೆ. ನೂರು ವರ್ಷಗಳ ಹಿಂದಿನ ತೀವ್ರತೆ ಎಷ್ಟಿರಬಹುದು ಎಂದು ಊಹಿಸಿದರೆ ಅದರ ಕರಾಳ ಮುಖದ ಅರಿವಾಗುತ್ತದೆ. ಇಂದು ನಾವು ಹೋರಾಟ ಹಾಗೂ ಚಳುವಳಿ ಎಂದು ದೌರ್ಜನ್ಯಗಳ ವಿರುದ್ಧ ದ್ವನಿ ಎತ್ತುವುದು ದೊಡ್ಡದಲ.್ಲ ನೂರು ವರ್ಷಗಳ ಹಿಂದೆಯೆ ತಮ್ಮ ಶಾಲಾ ಹಂತದಲ್ಲೇ ಜಾತೀಯತೆ ಹಾಗೂ ಶೋಷಣೆಗಳ ವಿರುದ್ಧ ತಿರುಗಿ ಬಿದ್ದು ಚಳುವಳಿಗಳನ್ನು ನಡೆಸಿದವರು ಬಾಬು ಜಗಜೀವನ್ ರಾಮ್‍ರು ಎಂದು ಅವರು ಹೇಳಿದರು.
ಹಸಿರು ಕ್ರಾಂತಿಯ ಸಂದರ್ಭವನ್ನು ನೆನಪಿಸುವಾಗ ಆಗಿನ ಪ್ರಧಾನಿ ಹಾಗೂ ವಿಜ್ಞಾನಿಗಳ ಬಗ್ಗೆಯಷ್ಟೆ ನಾವು ಸ್ಮರಿಸುತ್ತೇವೆ ಆದರೆ ಆಗಿನ ಕೃಷಿ ಸಚಿವರಾಗಿದ್ದ ಬಾಬು ಜಗಜೀವನ್‍ರನ್ನು ಮರೆಯುತ್ತಿದ್ದೇವೆ. ಹಾಗೆಯೇ ಪಾಕಿಸ್ಥಾನದ ವಿರುದ್ಧ ಸೇನಾ ಕಾರ್ಯಾಚರಣೆ ಸಂದರ್ಭದಲ್ಲಿ ಸಿಕ್ಕಂತಹ ವಿಜಯವನ್ನು ಅಂದಿನ ಪ್ರಧಾನಿಯನ್ನಷ್ಟೆ ನೆನೆಯುತ್ತೇವೆ ಅಂದಿನ ರಕ್ಷಣಾ ಸಚಿವರಾಗಿದ್ದವರು ಬಾಬು ಜಗಜೀವನ್ ರಾಮ್. ಬಾಂಗ್ಲಾ ವಿಭಜನೆಯಲ್ಲೂ ಸಹ ಪ್ರಮುಖ ಪಾತ್ರ ವಹಿಸಿದವರು ಅವರು. ಇಂತಹ ಅಪಾರವಾದಂತಹ ಅವರ ಕೊಡುಗೆಗಳನ್ನು ನಾವು ಮರೆಯುತ್ತಿರುವುದು ವಿಷಾಧದ ಸಂಗತಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಅತ್ಯಂತ ಕಿರಿಯ ವಯಸ್ಸಿನಲ್ಲಿಯೆ ಸಚಿವ ಸ್ಥಾನಕ್ಕೇರಿ ದೀರ್ಘಾವದಿ ಕೇಂದ್ರ ಸಚಿವರಾಗಿದ್ದಂತಹ ಏಕೈಕ ವ್ಯಕ್ತಿ ಜಗ ಜೀವನ್‍ರಾಗಿದ್ದಾರೆ. ಅವರು ಉತ್ತಮ ವಾಗ್ಮಿಗಳಾಗಿದ್ದರು. ಅವರು ಮಾಡಿದಂತಹ ಸ್ವಾಗತ ಭಾಷಣವನ್ನು ಮೆಚ್ಚಿ ಬನಾರಸ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣಕ್ಕಾಗಿ ಪ್ರವೇಶ ನೀಡಲಾಯಿತು ಎಂದು ಈ ಸಂದರ್ಭದಲ್ಲಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಪಂಚಾಯತ್ ಸಿಇಓ ಕೆ.ಶಿವರಾಮೇಗೌಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶೀಕಾರಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎ.ಕೆ ತಿಮ್ಮಪ್ಪ ವಿಶೇಷ ಉಪನ್ಯಾಸ ನೀಡಿದರು.

error: Content is protected !!